ವರದಿ : ದಿಕ್ಸೂಚಿ ಟೀಂ
ಉಡುಪಿ : ಬ್ರಹ್ಮಾವರ ತಾಲೂಕಿನ ಕುಮ್ರಗೋಡಿನ ಅಪಾರ್ಟ್ಮೆಂಟ್ ವೊಂದರಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ 5 ವಿಶೇಷ ತಂಡವನ್ನು ರಚಿಸಿ ಕೊನೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ವಿವಿಧ ಭಾಗಳಲ್ಲಿ ಹುಡುಕಾಟ ನಡೆಸಿ ಬೇರೆ ರಾಜ್ಯದಲ್ಲಿಯೂ ಕೂಡ ಹುಡುಕಾಟ ನಡೆಸಿ ಮಹತ್ವದ ಸುಳಿವಿನ ಆಧಾರದ ಮೇಲೆ ಉತ್ತರ ಪ್ರದೇಶದ ಗೋರಖ್ ಪುರದ SWAT ತಂಡದ ಮೂಲಕ ಆರೋಪಿ ಶ್ರೀ ಸ್ವಾಮಿನಾಥ್ ನಿಷಾದ (38) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಮೃತ ವಿಶಾಲ ಅವರ ಗಂಡ ರಾಮಕೃಷ್ಣ ಎಂಬಾತನ ಸುಪಾರಿ ನೀಡಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ದೊರಕಿದೆ. ರಾಮಕೃಷ್ಣನನ್ನು ಬ್ರಹ್ಮಾವರದ ಪೊಲೀಸ್ ಅಧಿಕಾರಿ ಅನಂತ ಪದ್ಮನಾಭ ಹಾಗೂ ಗುರುನಾಥ ಬಿ ಹಾದಿಮನಿ ರವರ ತಂಡವು ಬೈಂದೂರು ತಾಲೂಕಿನ ಉಪ್ಪುಂಡದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ 6 ತಿಂಗಳುಗಳ ಕಾಲ ದುಬೈನಲ್ಲಿ ಕುಳಿತು ಈ ಕೊಲೆಗೆ ಸಂಚು ರೂಪಿಸಲಾಗಿತ್ತು ಹಾಗೂ ಹಂತಕರಿಗೆ 2 ಲಕ್ಷಕಿಂತ ಹೆಚ್ಚು ಹಣ ನೀಡಿ ಕೊಲೆ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಭಾಗಿಯಾಗಿರುವ ಇಡೀ ತಂಡಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ನಿರೀಕ್ಷಕ ಪ್ರವೀಣ್ ಸೂದ್ 50,000 ನಗದು ಬಹುಮಾನ ಹಾಗೂ ತಂಡದ ಎಲ್ಲಾ ಸದಸ್ಯರಿಗೆ ಪ್ರಶಂಸನೀಯ ಪ್ರಮಾಣಪತ್ರ ಘೋಷಿಸಿದ್ದಾರೆ.
ದುಬೈನಲ್ಲೇ ಕುಳಿತು ಸ್ಕೆಚ್ ಹಾಕಿದ್ದ ಗಂಡ :
ಪತ್ನಿಯನ್ನು ಕೊಲೆ ಮಾಡುವ ಸಲುವಾಗಿ ಆರೇಳು ತಿಂಗಳ ಹಿಂದೆ ದುಬೈನಲ್ಲೇ ಪತಿ ರಾಮಕೃಷ್ಣ ಸಂಚು ರೂಪಿಸಿದ್ದ. ಅಲ್ಲಿಂದಲೇ ಸುಪಾರಿಗೆ 2 ಲಕ್ಷ ರೂ. ಪಾವತಿಸಿದ್ದ ಎಂದು ತಿಳಿದುಬಂದಿದೆ. ಮಾರ್ಚ್ ನಲ್ಲಿ ಕುಟುಂಬ ಸಮೇತ ಊರಿಗೆ ಬಂದಿದ್ದ ರಾಮಕೃಷ್ಣ ಗಾಣಿಗ ಸುಪಾರಿ ಕಿಲ್ಲರ್ ನನ್ನು ಉಪ್ಪಿನ ಕೋಟೆಯ ಫ್ಲ್ಯಾಟ್ ಗೆ ಕರೆಸಿಕೊಂಡು, ಪತ್ನಿಗೆ ತನ್ನ ಸ್ನೇಹಿತ ಎಂದು ಪರಿಚಯಿಸಿದ್ದ. ವಿದೇಶದಿಂದ ಆಸ್ತಿ ಸಂಬಂಧಿತ ಕೆಲಸಕ್ಕಾಗಿ ಮತ್ತೆ ಜು.12 ರಂದು ಮಗುವಿನೊಂದಿಗೆ ಊರಿಗೆ ಬಂದಿದ್ದ ವಿಶಾಲ ಗಾಣಿಗ, ಗುಜ್ಜಾಡಿಯ ತಾಯಿ ಮನೆಗೆ ತೆರಳಿದ್ದರು. ಬಳಿಕ ಬ್ಯಾಂಕ್ ಕೆಲಸವಿದೆ ಎಂದು ಆಟೋರಿಕ್ಷಾದಲ್ಲಿ ಮನೆಗೆ ಬಂದಿದ್ದರು ವಿಶಾಲ ಗಾಣಿಗ.
ಕೊಲೆಯಾಗುವ ವಾರದ ಹಿಂದೆ ಸ್ನೇಹಿತನ ಮೂಲಕ ಚಾಕಲೇಟ್ಸ್, ಕಾಸ್ಮೆಟಿಕ್ಸ್ ಕಳುಹಿಸಿದ್ದ ರಾಮಕೃಷ್ಣ. ಪತ್ನಿ ತನ್ನ ಅಣತಿಯಂತೆ ಫ್ಲ್ಯಾಟ್ ಗೆ ಹೋಗುತ್ತಾಳೆ ಎಂಬುದನ್ನು ದೃಢ ಪಡಿಸಿಕೊಂಡಿದ್ದ. ಜು.12 ರಂದು ಫ್ಲ್ಯಾಟ್ ಗೆ ತನ್ನಿಬ್ಬರು ಸ್ನೇಹಿತರು ಬಂದಿದ್ದಾರೆ. ತಕ್ಷಣ ತೆರಳುವಂತೆ ರಾಮಕೃಷ್ಣ ಹೇಳಿದ್ದ. ಪತಿಯ ಮಾತಿಗೆ ವಿಶಾಲ ಗಾಣಿಗ ಫ್ಲ್ಯಾಟ್ ಗೆ ತೆರಳಿದ್ದು ಪತಿ ಸ್ನೇಹಿತರೆಂದು ಪರಿಚಯಿಸಿದ್ದ ಸುಪಾರಿ ಕಿಲ್ಲರ್ ಗಳಿಂದ ಕೊಲೆಗೀಡಾದರು.
ಕ್ಲಿಷ್ಟ ಪ್ರಕರಣ; ಭೇದಿಸಿದ ಪೊಲೀಸರು
ಯಾವುದೇ ಸುಳಿವೂ ಇರಲಿಲ್ಲ…ಪ್ಲ್ಯಾಟ್ ನಲ್ಲಿ ಸಿಸಿಟಿವಿ ಕ್ಯಾಮರಾ ಇರಲಿಲ್ಲ. ಪತಿ ದುಬೈನಲ್ಲಿದ್ದಾನೆ…ಈ ಕೊಲೆ ಯಾರು ಮಾಡಿದರು?ಯಾಕಾಗಿ ಮಾಡಿದರು? ಎಂಬ ವಿಚಾರ ಪೊಲೀಸರಿಗೆ ಸವಾಲಾಗಿತ್ತು. ಕರಾವಳಿಗರನ್ನೇ ಬೆಚ್ಚಿ ಬೀಳಿಸಿದ ಪ್ರಕರಣವನ್ನು ಕೊನೆಗೂ ಭೇದಿಸಿದ್ದಾರೆ ಪೊಲೀಸರು. ಕುಂದಾಪುರದಿಂದ ಪಡುಬಿದ್ರಿ ವರೆಗೆ ಎಲ್ಲಾ ಸಿಸಿಟಿವಿ ಪರಿಶೀಲಿಸಿದರೂ ಸುಳಿವು ಸಿಕ್ಕಿರಲಿಲ್ಲ. ಆಟೋ ಚಾಲಕನನ್ನು ವಿಚಾರಣೆ ಮಾಡಿ ಆಗಿತ್ತು. ಸಾಕ್ಷ್ಮಿ ಇದ್ದಿದ್ದು ಕೊಲೆಯಾದ ದಿನ ಇದ್ದ ಎರಡು ಟೀ ಕಪ್ ಮಾತ್ರ.
ಉತ್ತರ ಪ್ರದೇಶದ ಗೋರಖ್ ಪುರ ಪೊಲೀಸರ ಸಹಕಾರದೊಂದಿಗೆ ಆರೋಪಿ ಶ್ರೀ ಸ್ವಾಮಿನಾಥ್ ನಿಷಾದ (38) ಎಂಬಾತನನ್ನು ಜು.19 ರಂದು ಬಂಧಿಸಿದರು. ಇನ್ನೋರ್ವನನ್ನು ನೇಪಾಳದ ಗಡಿಯಲ್ಲಿ ಬಂಧಿಸಲಾಯಿತು. ಪತಿಯೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಅನುಮಾನ ಇರಲಿಲ್ಲ. ಪತ್ನಿ ಸತ್ತ ಕೂಡಲೇ ಊರಿಗೆ ಬಂದಿದ್ದ ಆತ, ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಿದ್ದ. ಇನ್ನು ಕೊಲೆಗೆ ಪತಿ-ಪತ್ನಿ ನಡುವಿನ ವೈಮನಸ್ಸು ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ.