ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿ ಗ್ರಾಮ ಸಭೆ ಶನಿವಾರ ಪಂಚಾಯತಿ ಸಭಾ ಭವನದಲ್ಲಿ ಜರುಗಿತು. ನೋಡಲ್ ಅಧಿಕಾರಿಯಾಗಿ ಬಂದ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಬಿ.ಬಿ ಪ್ರಕಾಶ್ ಮಾತನಾಡಿ, ಸರಕಾರದ ಆದೇಶದಂತೆ ಸದ್ಯದಲ್ಲೇ ಶಾಲೆಗಳು ಆರಂಭವಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅನೇಕರು ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆ ಮಾಡುತ್ತಿದ್ದು, ಶಾಸಗಿ ಶಾಲೆಯಲ್ಲಿ ಹಿಂದಿನ ಶಾಲಾ ಫೀಸ್ ನೀಡದೆ ವರ್ಗಾವಣೆ ಪ್ರಮಾಣ ಪತ್ರ ನೀಡುತ್ತಿಲ್ಲ ಎನ್ನುವ ದೂರೂ ಕೇಳಿಬರುತ್ತಿದೆ. ಪೋಷಕರು ಶಾಲಾ ಫೀಸ್ ನೀಡಿಯೇ ವರ್ಗಾವಣೆ ಪ್ರಮಾಣ ಪತ್ರ ತಂದು ಏನೂ ಅತಂಕ ಪಡದೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದರು. ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಮೇಲಿನ ದೌರ್ಜನ್ಯ ಜಾಸ್ತಿ. ಆದರೆ ಪ್ರಚಾರಕ್ಕೆ ಬರುದಿಲ್ಲ ಆ ಕುರಿತು ಕೂಡಾ ಗಮನಹರಿಸಿರಿ ಎಂದು ಪೋಷಕರಿಗೆ ಕರೆ ನೀಡಿದರು.

ಆರೋಗ್ಯ , ಕಂದಾಯ , ಮೆಸ್ಕಾಂ , ಕೃಷಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಮಕ್ಕಳ ರಕ್ಷಣಾ ಘಟಕ , ಪಶುಸಂಗೋಪನೆ ಬ್ಯಾಂಕ್ ,ಸ್ವ ಉದ್ಯೋಗ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಉಪಸ್ಥಿರಿದ್ದು, ಗ್ರಾಮಸ್ಥರಿಗೆ ಸವಲತ್ತುಗಳ ಮಾಹಿತಿ ನೀಡಿದರು.

ಗ್ರಾಮದ ಕುಂಟೂರು ಬಳಿ ಘನ ಮತ್ತು ಒಣತ್ಯಾಜ್ಯ ಘಟಕ ಆರಂಭಿಸಲು ಉದ್ದೇಶಿಸಿದ ಸರಕಾರಿ ಸ್ಥಳದ ಇನ್ನೊಂದು ಭಾಗದಲ್ಲಿ ಮಾಡುವಂತೆ ಆ ಭಾಗದ ಜನರು ಒತ್ತಾಯಿಸಿದರು. ಮಹಿಳೆಯರ ಕುರಿತು ವಿಧವೆಯರ ಮತ್ತು ವಿಚ್ಚೇದಿತರ ಕುರಿತು ಅವರಿಗೆ ಸಿಗುವ ಸವಲತ್ತುಗಳಂತೆ ಪುರುಷರಿಗೆ ಯಾಕಿಲ್ಲ ಎಂದು ಪುರುಷರೊಬ್ಬರು ಗ್ರಾಮಸಭೆಯಲ್ಲಿ ಅಧಿಕಾರಿಗಳ ಮುಂದೆ ಗಮನ ಸೆಳೆದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ, ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ, ಉಪಾಧ್ಯಕ್ಷೆ ಪದ್ಮಾವತಿ ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ ಉಪಸ್ಥಿತರಿದ್ದರು.

