ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕುರು ದ್ವೀಪದಲ್ಲಿ ವಾಸವಿರುವ ಶಿವಾ ಮತ್ತು ಸರೋಜಾ ದಂಪತಿಗಳ ಇಬ್ಬರು ಹೆಣ್ಣುಮಕ್ಕಳು ಈ ಸಾಲಿನ ಜುಲೈ ೧೯,೨೨ ರಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಸಂಜನಾ ಮತ್ತು ಶಿಲ್ಪಾ ಅವರನ್ನು ದೋಣಿಯ ಮೂಲಕ ಡಿಡಿಪಿಐ ಉಡುಪಿ, ಬೈಂದೂರು ತಹಶೀಲ್ದಾರ ಕರೆ ತಂದಿದ್ದು ರಾಜ್ಯಮಟ್ಟದ ಸುದ್ದಿಯಾಗಿತ್ತು. ಈ ಇಬ್ಬರು ಬಾಲಕಿಯರ ಇತ್ತೀಚೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆ ಆಗಿದ್ದು, ಸಂಜನಾ ದ್ವತೀಯ ದರ್ಜೆ, ಶಿಲ್ಪಾ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ದಿನಾ ಶಾಲೆಗೆ ಮತ್ತು ಪರೀಕ್ಷಾ ಕೇಂದ್ರಕ್ಕೆ ಬರಲು ದೋಣಿ ಹತ್ತಿ ಬರಬೇಕಾದ ಸ್ಥಿತಿ ಇದೆ. ಇಂತಹ ದುಸ್ಥಿತಿಯಲ್ಲಿಯೂ ಕಲಿಯುವ ಆಸಕ್ತಿಯಿಂದ ಬಂದು ಪರೀಕ್ಷೆ ಬರೆದು ಉತ್ತೀರ್ಣರಾದ ಇವರೀರ್ವರಿಗೂ ಗೌರವಿಸಿ ಅಭಿನಂದಿಸಲು ಉಡುಪಿ ಡಿಡಿಪಿಐ ಎನ್.ಹೆಚ್.ನಾಗೂರ ನೇತೃತ್ವದ ತಂಡ ಕುರು ದ್ವೀಪಕ್ಕೆ ದೋಣಿ ಹತ್ತಿ ಆ ಬಾಲಕಿಯರ ಮನೆಗೆ ಭೇಟಿ ನೀಡಿದರು.
ಡಿಡಿಪಿಐ ಮತ್ತು ಅವರ ತಂಡವು ಈರ್ವರಿಗೂ ಶಾಲು ಹೊದಿಸಿ ಮುತ್ತಿನ ಹಾರ ಹಾಕಿ ಸಿಹಿ ತಿನಿಸಿ, ಹಣ್ಣುನೀಡಿ, ಮುಂದಿನ ಪಿಯುಸಿ ಶಿಕ್ಷಣಕ್ಕೆ ಫೀಸಿನ ವೆಚ್ಚದ ಮೊತ್ತವನ್ನು ನೀಡಿ ಉತ್ತಮ ಫಲಿತಾಂಶ ಪಡೆದ ಇಬ್ಬರನ್ನು ಅಭಿನಂದಿಸಿದರು.


ಈ ಸಂದರ್ಭ ಬಿಇಓ ಕುಂದಾಪುರ ಎಸ್.ಕೆ ಪದ್ಮನಾಭ, ಇಸಿಓ ಬೈಂದೂರ ಕರುಣಾಕರ ಶೆಟ್ಟಿ, ಇಸಿಓ ಬ್ರಹ್ಮಾವರ ರಾಘವ ಶೆಟ್ಟಿ, ಆ ವಲಯದ ಬಿ.ಆರ್.ಪಿ ರಾಮಕೃಷ್ಣ ರಾಮನಾಥ, ಸಿ.ಆರ್.ಪಿ, ಅಣ್ಣಪ್ಪ ಶೆಟ್ಟೊ ಮು.ಗು. ನೂಜಾಡಿ ಉಪಸ್ಥಿತರಿದ್ದರು.
ಪ್ರತಿ ದಿನ ಇಲ್ಲಿನ ವಿದ್ಯಾರ್ಥಿಗಳು ನದಿಯನ್ನು ದೋಣಿ ಮೂಲಕ ಹೋಗಬೇಕಾದ ಕಷ್ಟದ ನಡುವೆ ಉತ್ತಮ ಸಾಧನೆ ಮಾಡಿದ್ದಾರೆ. ಆದರೆ, ಇಲ್ಲಿ ಸೇತುವೆ ಆಗಬೇಕು ಎನ್ನುವ ಜನರ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ.
