ಬೆಂಗಳೂರು : 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಮೃತ ಮಹೋತ್ಸವದಂತೆ, ಅಮೃತ ಯೋಜನೆಗಳನ್ನು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದಂತ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನಡೆಸಿದರು. ಬಳಿಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದಂತ ಅವರು, ರಾಜ್ಯದ ಪ್ರತಿಯೊಬ್ಬರಿಗೆ ಸರ್ಕಾರದ ಯೋಜನೆಗಳು ತಲುಪಬೇಕು. ಹೊಸ ಗುರಿ, ಹೊಸ ಚಿಂತನೆ, ಹೊಸ ಆಶಯಗಳೊಂದಿಗೆ ಸರ್ಕಾರ ಮಹತ್ವದ ಹೆಜ್ಜೆಯನ್ನು ಇರಿಸಲಿದೆ ಎಂಬುದಾಗಿ ಹೇಳಿದರು.

ಅಮೃತ ಗ್ರಾಮ ಪಂಚಾಯತಿ :
ಅಮೃತ ಮಹೋತ್ಸವದ ಸಂದರ್ಭದಲ್ಲಿಯೇ, ಅಮೃತ ಗ್ರಾಮ ಪಂಚಾಯ್ತಿ ಯೋಜನೆ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃ ರೈತ ಉತ್ಪಾದಕರ ಸಂಸ್ಥೆ ಯೋಜನೆ, ಅಮೃತ ಶಾಲಾ ಸೌಲಭ್ಯ ಯೋಜನೆ, ಅಮೃತ ಕಿರು ಉದ್ದಿಮೆ ಯೋಜನೆ, ಅಮೃತ ಅಂಗನವಾಡಿ ಯೋಜನೆ ಸೇರಿದಂತೆ ವಿವಿಧ ಅಮೃತ ಯೋಜನೆಗಳನ್ನು ಘೋಷಣೆ ಮಾಡಿದರು.

ಅಮೃತ ಗ್ರಾಮ ಪಂಚಾಯ್ತಿ ಯೋಜನೆಯಡಿ ಗ್ರಾಮೀಣ ವಸತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. 750 ಗ್ರಾಮ ಪಂಚಾಯ್ತಿಗಳಲ್ಲಿ ವಸತಿ ರಹಿತರು, ಬಡವರನ್ನು ಗುರ್ತಿಸಿ, ವಸತಿ ಯೋಜನೆ ರೂಪಿಸಲಾಗುತ್ತದೆ. ಅಮೃತ ರೈತ ಉತ್ಪಾದಕರ ಸಂಸ್ಥೆಯ ಮೂಲಕ ರೈತರಿಗೆ ವಿವಿಧ ಯೋಜನೆಗಳ ಪ್ರಯೋಜನ ಒದಗಿಸಿಕೊಡಲಾಗುತ್ತದೆ ಎಂದರು.

ಅಮೃತ ಶಾಲಾ ಸೌಲಭ್ಯ:
ಅಮೃತ ಶಾಲಾ ಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 750 ಶಾಲೆಗಳ ಅಭಿವೃದ್ಧಿಗೆ ಈ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಗಳಲ್ಲಿನ ಗ್ರಂಥಾಲಯ, ಸುಸಜ್ಜಿತ ಶಾಲೆಗಳ ನಿರ್ಮಾಣ, ಪ್ರಯೋಗಾಲಯ, ಶಾಲಾ ಶೌಚಾಲಯ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಅಮೃತ ಅಂಗನವಾಡಿ :
ಅಮೃತ ಅಂಗನವಾಡಿ ಯೋಜನೆಯಿಂದಾಗಿ ರಾಜ್ಯದಲ್ಲಿ 750 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಪ್ರತಿ ಅಂಗನವಾಡಿಗಳಿಗೆ 1 ಲಕ್ಷ ನೀಡುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ಅಮೃತ ನಿರ್ಮಲ ನಗರ :
ಅಮೃತ ನಿರ್ಮಲ ನಗರ ಯೋಜನೆಯ ಅನುಷ್ಠಾನಗೊಳಿಸುವ ಮೂಲಕ, ಸ್ಥಳೀಯ ಸಂಸ್ಥೆಗಳನ್ನು 75 ಕೋಟಿ ವೆಚ್ಚದಲ್ಲಿ ಸೌಂದರ್ಯ ಕಾಪಾಡುವಂತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪ್ರತಿ ಸ್ಥಳೀಯ ಸಂಸ್ಥೆಗಳಿಗೆ 1 ಕೋಟಿ ನೀಡಲಾಗುತ್ತದೆ. ಇದಕ್ಕಾಗಿ 75 ಕೋಟಿ ಅನುದಾನ ನೀಡಲಾಗುತ್ತದೆ. ಅಮೃತ ಕಿರು ಉದ್ದಿಮ ಯೋಜನೆ ಅನುಷ್ಠಾನದ ಮೂಲಕ ಸ್ವಸಹಾಯಕ ಸಂಘಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
