ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ಎಸ್ಸಿಡಿಸಿಸಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಸಾಧಿಸಿದೆ. ಬ್ಯಾಂಕಿನಿಂದ ಪಡೆದ ಸಾಲವನ್ನು ಸದ್ವೀನಿಯೋಗ ಪಡಿಸಿಕೊಂಡು, ಕ್ಲಪ್ತ ಸಮಯದಲ್ಲಿ ಸಾಲವನ್ನು ಮರು ಪಾವತಿ ಮಾಡುವ ಮೂಲಕ ಗ್ರಾಹಕರು ವ್ಯವಹಾರ ಹಾಗೂ ವಿಶ್ವಾಸ ಬದ್ಧತೆಯನ್ನು ಉಳಿಸಿಕೊಳ್ಳುತ್ತಿದ್ದಾರೆ ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಹುಣ್ಸೆಮಕ್ಕಿಯ ಮುತ್ತಯ್ಯ ಹೆಗ್ಡೆ ಬಿಲ್ಡಿಂಗ್ಗೆ ಸ್ಥಳಾಂತರಗೊಂಡ ಎಸ್ಸಿಡಿಸಿಸಿ ಬ್ಯಾಂಕ್ನ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.


ಜನರಿಂದ ನಡೆಯುವ ಸಹಕಾರ ಸಂಸ್ಥೆಗಳ ಮೇಲೆ ಗ್ರಾಹಕರಿಗೆ ವಿಶೇಷ ಭರವಸೆಗಳಿರುತ್ತದೆ. ಅವರ ಅಗತ್ಯತೆಗಳನ್ನು ಮನಗೊಂಡು ಸಾಲ ನೀಡಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು. ಸಹಕಾರ ಸಂಸ್ಥೆಗಳು ಜನರ ಬಳಿಗೆ ತೆರಳಬೇಕು. ಜನರ ಆರ್ಥಿಕ ಮಟ್ಟ ಸುಧಾರಣೆಯಾಗುವುದರಿಂದ ಸಹಕಾರ ಕ್ಷೇತ್ರವೂ ಬೆಳೆಯುತ್ತದೆ. ಮಹಿಳೆಯರು ಸೇರಿ ಸಮಾಜದಲ್ಲಿ ಸ್ವಾವಲಂಭಿ ಬದುಕನ್ನು ಕಟ್ಟುಕೊಳ್ಳುವವರಿಗೆ ಸಹಕಾರಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ನವೋದಯ ಸ್ವ ಸಹಾಯ ಸಂಘಗಳ ಮೂಲಕ ಸ್ವ ಉದ್ಯೋಗದ ಮೂಲಕ ಸ್ವತಂತ್ರವಾಗಿ ಸ್ವಾವಲಂಭಿ ಜೀವನವನ್ನು ನಡೆಸಲು ಸಹಕಾರ ನೀಡಲಾಗುತ್ತಿದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಹಾಗೂ ಬ್ಯಾಂಕಿನ ಠೇವಣೆದಾರರನ್ನು ಉತ್ತೇಜಿಸುವ ಸಲುವಾಗಿ ಠೇವಣಿಗಳ ಮೇಲೆ ಶೇ.೧ ರ ಬಡ್ಡಿದರ ಹೆಚ್ಚಳ ಮಾಡಲಾಗುವುದು ಎಂದು ಎಂ.ಎನ್.ರಾಜೇAದ್ರ ಕುಮಾರ್ ತಿಳಿಸಿದರು.
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಂ.ಮಹೇಶ ಹೆಗ್ಡೆ, ಕಟ್ಟಡ ಮಾಲೀಕರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ವಸಂತಿ ಮಂಜಯ್ಯ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರುಗಳಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ ರೈ, ಕೆ.ಹರಿಶ್ಚಂದ್ರ, ಬಿ.ಅಶೋಕ್ ಕುಮಾರ್ ಶೆಟ್ಟಿ, ಎಂ.ವಾದಿರಾಜ ಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಹಾಪ್ರಬಂಧಕ ಗೋಪಿನಾಥ್ ಭಟ್, ಹುಣ್ಸೆಮಕ್ಕಿ ಶಾಖೆಯ ಶಾಖಾ ವ್ಯವಸ್ಥಾಪಕ ಬಿ.ಬಿ ಜೀವನ್ ಶೆಟ್ಟಿ ಇದ್ದರು.
ಸ್ಥಳಾಂತರಗೊಂಡ ಕಟ್ಟಡದ ಮಾಲಕರಾದ ಹುಣ್ಸೆಮಕ್ಕಿ ಹೆಗ್ಡೆ ಹೌಸ್ ವಸಂತಿ ಮಂಜಯ್ಯ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ವಿವಿಧ ಸಾಲಪತ್ರಗಳನ್ನು ವಿತರಿಸಲಾಯಿತು. ನೂತನವಾಗಿ ರಚನೆಗೊಂಡ ನವೋದಯ ಸ್ವಸಹಾಯ ಗುಂಪುಗಳ ಉದ್ಘಾಟನೆ, ಚೈತನ್ಯ ವಿಮಾ ಯೋಜನೆಯ ವಿಮಾ ಮೊತ್ತ ವಿತರಣೆ ಮಾಡಲಾಯಿತು.
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಸ್ವಾಗತಿಸಿದರು, ಶಿವರಾಮ್ ಪೂಜಾರಿ ಯಡ್ತರೆ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.
