ವರದಿ : ದಿನೇಶ್ ರಾಯಪ್ಪನಮಠ
ಕೋಟ: ಇಲ್ಲಿನ ಕೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಿಳಿಯಾರು ಗ್ರಾಮದ ಕಾಲುದಾರಿ ಸಮಸ್ಯೆ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ನ ಹಂದಟ್ಟು ಹರಿಯುವ ನೀರಿನ ಸಮಸ್ಯೆ, ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಬನ್ನಾಡಿ ಚರಪಿನ ಸಿದ್ಧೇಶ್ವರ ದೇವಳದ ಸನಿಹ ರಸ್ತೆ ಸಮಸ್ಯೆ ಕುರಿತಂತೆ ಮಂಗಳವಾರ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬನ್ನಾಡಿ ದೇವಳದ ಸನಿಹ ರಸ್ತೆ ಕಾಂಕ್ರೀಟೀಕರಣದ ವಿವಾದಿತ ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಅಹವಾಲಿನಂತೆ ರಸ್ತೆ ಕಾಂಕ್ರೀಟಿಕರಣ ತಡೆಗೊಳಿಸಿ ಕೋಟ್ ಕಟಗಟ್ಟಲೆಗೆ ಎಳೆದೊಯ್ದ ದೇವಳದ ಸಮಿತಿಯವರಲ್ಲಿ ತಹಶೀಲ್ದಾರ್ ಮಾತುಕತೆಗೆ ನಡಸಿದರಲ್ಲದೆ, ಕೋಟ್9 ತೀರ್ಪಿನ ನಂತರ ಈ ಕುರಿತಂತೆ ಚರ್ಚಿಸಲು ಸಲಹೆ ನೀಡಿದರು.
ಕೋಟ ಗ್ರಾಮಪಂಚಾಯತ್ ಗಿಳಿಯಾರು ಗ್ರಾಮದ ಕದ್ರಿಕಟ್ಟು ಪರಿಸರದ ಕಾಲು ದಾರಿ ಸಮಸ್ಯೆಯ ಕುರಿತು ಗ್ರಾಮಸ್ಥರು ಹಾಗೂ ಓರ್ವಾಕೆಯೊಂದಿಗೆ ಚರ್ಚಿಸಿ ಭಾಗಶಃ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಂಡರು. ಅದೇ ರೀತಿ ಕೋಟತಟ್ಟು ಗ್ರಾಮಪಂಚಾಯತ್ ಹಂದಟ್ಟು ಪರಿಸರದ ಮಳೆಗಾಲದಲ್ಲಿ ಹರಿಯುವ ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರು ಹಾಗೂ ನೀರಿಗೆ ತಡೆಯೊಡ್ಡಿದ ಕುಟುಂಬದೊಂದಿಗೆ ಚರ್ಚಿಸಿ ಕೆಲವೆ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಮುನ್ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ಸಮಸ್ಯೆಗಳಿದ್ದರೂ ಧ್ವೇಷದಿಂದ ಏನು ಸಾಧಿಸಲು ಸಾಧ್ಯವಿಲ್ಲ ಸಹನೆ,ವಿನಯತೆ, ಸಾಮರಸ್ಯದಿಂದ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಎಂದು ಕಿವಿಮಾತು ಹೇಳಿದರು.ಕೋಟ ಕಂದಾಯ ನಿರೀಕ್ಷಕ ರಾಜು, ಕೋಟ ಗ್ರಾಮಲೆಕ್ಕಿಗ ಚಲುವರಾಜು, ವಡ್ಡರ್ಸೆ ಗ್ರಾಮ ಲೆಕ್ಕಿಗ ವಿಜಯ ಶೆಟ್ಟಿ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯ ಚಂದ್ರ ಪೂಜಾರಿ,ಸಂತೋಷ್ ಪ್ರಭು,ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಪ್ರಕಾಶ್ ಹಂದಟ್ಟು, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ, ಎ.ಎಸ್ಐ ಗಣೇಶ್ ಪೈ, ಗ್ರಾಮಸಹಾಯಕ ರಾಜು ಕುಂದರ್, ಗ್ರಾಮಸ್ಥರು ಉಪಸ್ಥಿತರಿದ್ದರು.
