ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕೇಂದ್ರದ ಕೃಷಿ ಸಚಿವರು ಈ ಭಾಗದ ಸಂಸತ್ ಸದಸ್ಯರೂ ಆಗಿರುವ ಶೋಭಾ ಕರಂದ್ಲಾಜೆ ಅವರು ಜನಾಶೀರ್ವಾದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಗೆ ಹಾಗೂ ಹೆಬ್ರಿಗೆ ಬರುತ್ತಿದ್ದಾರೆ ಅವರಿಗೆ ಸ್ವಾಗತ. ಆದರೆ ಹೆಬ್ರಿ ತಾಲ್ಲೂಕಿನ ಕೆಲವೊಂದು ಗಂಭೀರವಾದಂತಹ, ಜನಸಾಮಾನ್ಯರು ಕಷ್ಟ ನಷ್ಟ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಉತ್ತರಿಸಬೇಕು ಮತ್ತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಆನಂತರ ಅವರು ಜನಾಶೀರ್ವಾದ ಪಡೆಯಲಿ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಗ್ರಹಿಸಿದರು. ಅವರು ಬುಧವಾರ ಹೆಬ್ರಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಮುಖ ಆಗ್ರಹ :
1) ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ 94 ಸಿ ಮತ್ತು ಅಕ್ರಮ ಸಕ್ರಮ ಹಾಗೂ 53 ರಲ್ಲಿ ಅರ್ಜಿ ಕೊಟ್ಟಂತಹ ಫಲಾನುಭವಿಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
2) ಕಸ್ತೂರಿ ರಂಗನ್ ಮತ್ತು ಹುಲಿ ಯೋಜನೆ.
3) ಕೃಷಿಯನ್ನು ಹಾನಿ ಮಾಡುತ್ತಿರುವ ಕಾಡು ಪ್ರಾಣಿಗಳ ಉಪಟಳದ ಬಗ್ಗೆ ಏನು ಪರಿಹಾರ?
4) ಅರಣ್ಯ ಹಕ್ಕು ಪತ್ರ ಕಾಯ್ದೆ
5) ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಸರಿಪಡಿಸಿ.

ಹೆಬ್ರಿ ಮತ್ತು ಕಾರ್ಕಳ ಜನತೆಯ ಪರವಾಗಿ ಬ್ಲಾಕ್ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಮಂಜುನಾಥ್ ಪೂಜಾರಿ ಅವರು ಹೇಳಿದರು.
ಈ ಭಾಗದ ಶಾಸಕರು ಹಾಗೂ ಸಚಿವರಾದ ವಿ.ಸುನಿಲ್ ಕುಮಾರ್ ಅವರು ಈ ಬಗ್ಗೆ ಸಮಸ್ಯೆಯನ್ನು ಪರಿಹರಿಸಲು ಗಂಭೀರವಾಗಿ ಕೆಲಸ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಪಕ್ಷದ ಮುಖಂಡರಾದ ಶಶಿಕಲಾ ಡಿ. ಪೂಜಾರಿ, ಶೀನ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ರಜನಿ ಹೆಬ್ಬಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
