ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಹೆಚ್ಚು ಮತಗಳ ಮುನ್ನಡೆಯಿಂದ ಗೆಲ್ಲಿಸಿಕೊಟ್ಟ ಕ್ಷೇತ್ರ ಕುಂದಾಪುರ. ಇಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ಮುಂದೆಯೂ ಹೀಗೆ ಜನಾಶಿರ್ವಾದ ಮಾಡುತ್ತಿರಿ ಎಂದು ನಂಬಿದ್ದೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಕುಂದಾಪುರ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಮಾತನಾಡಿದರು.
ವಿರೋಧ ಪಕ್ಷಗಳು ನೂತನ ಮೂರು ಕೃಷಿ ಮಸೂದೆಯ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಮುಕ್ತ ಚರ್ಚೆಗೆ ಬರುತ್ತಿಲ್ಲ. ಬಂದರೆ ನಾವು ಉತ್ತರಿಸಲು ಸಿದ್ದ ಎಂದು ಹೇಳಿದರು.


ಸ್ವಾಮಿನಾಥನ್ ವರದಿಯಲ್ಲಿರುವ ಅಂಶಗಳನ್ನು ಹೆಚ್ಚಾಗಿ ಈಡೇರಿಸಿರುವುದು ನರೇಂದ್ರ ಮೋದಿಯವರ ಬಿಜೆಪಿ ಸರಕಾರ. ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಅನೇಕ ಸಮಿತಿಗಳು ವರದಿ ನೀಡಿದೆ. ಎಪಿಎಂಸಿ ಯಲ್ಲಿ ಹೆಚ್ಚಾಗಿರುವ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸುವಂತೆ ರೈತರೇ ಬೇಡಿಕೆ ಇಟ್ಟಿದ್ದರು.
ಉಡುಪಿ ಜಿಲ್ಲೆಯಲ್ಲಿ ಅಡಿಕೆ, ತೆಂಗು, ಭತ್ತ ಬೆಳೆಗಾರರ ಸಮಸ್ಯೆಯನ್ನರಿತು ಈ ಬೆಂಬಲ ಬೆಲೆ ನೀಡಲು ಪ್ರಯತ್ನಿಸುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಸಾಧ್ಯವಿರುವ ರೈತರ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ ಎಂದರು.
ಸಚಿವೆಗೆ ಭವ್ಯ ಸ್ವಾಗತ :

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಶೋಭಾ ಕರಂದ್ಲಾಜೆಯವರನ್ನು ಕುಂದಾಪುರ ಬಿಜೆಪಿ ವತಿಯಿಂದ ಗುರುವಾರ ಪಕ್ಷದ ಕಚೇರಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ತಾಲೂಕಿನ ಗಡಿ ಭಾಗವಾದ ಮಾಬುಕಳದಲ್ಲಿ ಆರತಿ ಮಾಡಿ ಬರಮಾಡಿಕೊಳ್ಳಲಾಯಿತು.
ಹರೀಶ್ ಬಂಗೇರರಿಗೆ ಸನ್ಮಾನ :

ಸೌದಿಯಲ್ಲಿ ತಾನು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಬಂದ ಹರೀಶ್ ಬಂಗೇರ ಅವರನ್ನು ಕೇಂದ್ರ ಸಚಿವೆ ಸನ್ಮಾನಿಸಿದರು.
ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ. ಆದರೆ ನನ್ನ ಹಾಗೆ ಅನೇಕರು ಶಿಕ್ಷೆ ಅನುಭವಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಶಿಕ್ಷೆ ಕೊಡಿಸಿ, ಅದು ಎಲ್ಲರಿಗೂ ಪಾಠವಾಗಬೇಕು ಎಂದು ಹರೀಶ್ ಬಂಗೇರ ಮನವಿ ಮಾಡಿ ಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಅವರಿಗೆ ಎಂದಿಗೂ ಕ್ಷಮೆ ಇಲ್ಲ. ನಮ್ಮ ದೇಶದ ಕಾನೂನಿನ ಪ್ರಕಾರ ಅವರಿಗೆ ಉಗ್ರ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದ.ಕ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಕುಂದಾಪುರ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಶ್ರೀಷ ನಾಯಕ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಕುಂದಾಪುರ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು ಉಪಸ್ಥಿತರಿದ್ದರು.