ವರದಿ : ದಿನೇಶ್ ರಾಯಪ್ಪನಮಠ
ಕೋಟ : ಅರವತ್ತರಲ್ಲಿ ಅರಳು ಮರಳು ಅಂದರೆ ಅರವತ್ತು ವರ್ಷಕ್ಕೆ ಅರಳ ಬೇಕು. ಆಮೇಲೆ ಸಮಾಜ ಮುಖಿಯಾಗಿ ಕೆಲಸ ಮಾಡಿ ಮರಳಬೇಕು ಎಂದು ಪಾಂಡೇಶ್ವರದ ಯೋಗ ಗುರು ಡಾ.ವಿಜಯ ಮಂಜರ್ ಹೇಳಿದರು.
ಹಂಗಾರಕಟ್ಟೆ ಐರೋಡಿಯ ಚೇತನಾ ಪ್ರೌಢಶಾಲೆಯ ಸಭಾಂಗಣದಲ್ಲಿ ಗುರುವಾರ ಐರೋಡಿ ಸದಾಶಿವ ಅಲ್ಸೆ ಅವರು ಬರೆದ ಕಲ್ಮಕ್ಕಿ ಅಲ್ಸೆ ಪ್ರಕಾಶನದಿಂದ ಹೊರತಂದ ಅರಸು ಅನುಸರಿಸು ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅರಸು ಅನುಸರಿಸು ಪುಸ್ತಕ ಓದಿ ಅದರಲ್ಲಿರುವಂತೆ ಅನುಕರಿಸು ಎಂದು ಕಿವಿ ಮಾತು ಹೇಳಿದರು.
ಬೈಕಾಡಿಯ ನಿವೃತ್ತ ಅಧ್ಯಾಪಕ ಬಿ.ಶ್ರೀನಿವಾಸ ಭಟ್ ಪುಸ್ತಕದ ಕುರಿತು ಮಾತನಾಡಿ, ಜೀವನದಲ್ಲಿ ಗುರಿ ಇರಬೇಕೇ ಹೊರತು ಉರಿ ಇರಬಾರದು. ಇಂತಹ ನಲ್ನುಡಿಗಳು ಪುಸ್ತಕದಲ್ಲಿರುವುದರ ಬಗ್ಗೆ ಬೆಳಕು ಚೆಲ್ಲಿದರು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಅಧ್ಯಕ್ಷತೆ ವಹಿಸಿ ಮಾತನಾಡಿ ಜ್ಞಾನಿಯಿಂದ ಹಿಡಿದು ಅಜ್ಞಾನಿಯವರೆಗೆ ಓದಿಸಿಕೊಂಡು ಹೋಗುವ ಪುಸ್ತಕ ಇದು. ತಂತ್ರ ಜ್ಞಾನದ ಹಿಂದೆ ಹೋಗುತ್ತಾ ಹೋಗುತ್ತಾ ಮನುಷ್ಯ ಸಾಂಸ್ಕೃತಿಕವಾಗಿ ಐವತ್ತು ವರ್ಷ ಹಿಂದಕ್ಕೆ ಹೋಗುತ್ತಾ ಇದ್ದಾನೆ ಎಂದು ಅಭಿಪ್ರಾಯಪಟ್ಟರು.
ಚೇತನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಜಿ, ಗೀತಾ, ಕಮಲಾಕ್ಷಿ ಉಪಸ್ಥಿತರಿದ್ದರು. ಸದಾಶಿವ ಅಲ್ಸೆ ಸ್ವಾಗತಿಸಿದರು. ರಾಮದೇವ ಹಂದೆ ವಂದಿಸಿದರು. ವಿಘ್ನೇಶ್ವರ ಅಡಿಗ ಕಾರ್ಯಕ್ರಮ ನಿರೂಪಿಸಿದರು.