ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಯೋಜನೆ ಹೈವೇ ನೆಕ್ಸ್ಟ್ ಅನ್ನು ಶುಕ್ರವಾರ ಜಿಲ್ಲಾಧಿಕಾರಿ ಜಿ.ಜಗದೀಶ್ ಶಿರೂರು ಟೋಲ್ ಪ್ಲಾಜಾದಲ್ಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸೇವೆ ಸಿಗಲಿದೆ ಎಂದರು.

ಹೆದ್ದಾರಿ ಪ್ರಾಧಿಕಾರದವರು ಕುಂದಾಪುರ ಮೇಲ್ಸೆತುವೆ, ಪಡುಬಿದ್ರೆ ಬ್ರಿಡ್ಜ್ ನ ಕಾಮಗಾರಿಯನ್ನು ಪೂರ್ಣಗೊಳಿಸಿದಕ್ಕೆ ಅವರಿಗೆ ಅಭಿನಂದನೆಗಳು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಪ್ರಾಜೆಕ್ಟ್ ಡೈರೆಕ್ಟರ್ ಶಿಶುಮೋಹನ್ ಮಾತನಾಡಿ ಸರಕಾರದ ವಿನೂತನ ಯೋಜನೆ ಇದಾಗಿದೆ. ಹೊಸದಾಗಿ ನಿರ್ಮಾಣಗೊಂಡ ಕಾರವಾರ – ಕುಂದಾಪುರ ಹೆದ್ದಾರಿ ಮತ್ತು ಉತ್ತರಕನ್ನಡ ದಿಂದ ಶಿರೂರುವರೆಗೆ ಒಟ್ಟು ೩ ಟೋಲ್ ಪ್ಲಾಜಾ ಸಿಗಲಿದೆ. ಎಲ್ಲಾ ಟೋಲ್ ಪ್ಲಾಜಾದಲ್ಲಿ ಈ ಸೇವೆ ಪ್ರಯಾಣಿಕರಿಗೆ ದೊರೆಯಲಿದೆ ಎಂದರು.
ಇದರ ಜೊತೆಗೆ ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಸೌಲಭ್ಯಗಳು, ಮಕ್ಕಳಿಗೆ ಹಾಲುಣಿಸಲು ವಿಶೇಷ ವ್ಯವಸ್ಥೆಯನ್ನು ಸೇರ್ಪಡೆಗೊಳಿಸಲು ಚಿಂತನೆ ನಡೆದಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕುಂದಾಪುರ ಉಪ ವಿಭಾಗಧಿಕಾರಿ ಕೆ.ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಐ.ಆರ್.ಬಿ ಅಧಿಕಾರಿ ಮೋಹನ್ ದಾಸ್, ಜನರಲ್ ಮ್ಯಾನೇಜರ್ ವಿವೇಕ್, ಪ್ರಫುಲ್ ಉಪಸ್ಥಿತರಿದ್ದರು.
