ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕನ್ನಡ ಸಾಹಿತ್ಯಕ್ಕೆ ಯಕ್ಷಗಾನ ಪ್ರಸಂಗಗಳ ಕೊಡುಗೆ ಮಹತ್ವದ್ದು. ವಿವಿಧ ಪದ್ಯಜಾತಿಗಳಿಂದ ಛಂದೋಬದ್ಧವಾದ ಸಾಕಷ್ಟು ಪ್ರಸಂಗ ಕೃತಿಗಳನ್ನು ಸಾಹಿತ್ಯವಲಯಕ್ಕೆ ನೀಡಿದ ಅಭಿಮಾನದ ಕವಿ ಪರಂಪರೆ ನಮ್ಮದು. ಅವುಗಳಲ್ಲಿ ಪೌರಾಣಿಕ ಪ್ರಸಂಗಗಳು ಸಾರ್ವಕಾಲಿಕ ಮನ್ನಣೆಯನ್ನು ಪಡೆಯುವ ಅಂತಃಸತ್ವವನ್ನು ಹೊಂದಿದವು. ಪುರಾಣವೆಂಬ ಸಾಗರವನ್ನು ಒಳ ಹೊಕ್ಕು ಇಳಿದು ನೋಡಿದರೆ ಸಾಕಷ್ಟು ರತ್ನ ಸದೃಶ ಕಥಾ ವಸ್ತುಗಳಿವೆ. ಅವುಗಳನ್ನು ಆಧರಿಸಿ ಹೆಚ್ಚು ಹೆಚ್ಚು ಯಕ್ಷಗಾನ ಪ್ರಸಂಗಗಳು ರಚನೆಯಾಗಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಪಾರಂಪಳ್ಳಿ ನರಸಿಂಹ ಐತಾಳರಿಂದ ರಚನೆಯಾದ ಪದ್ಮ ಸೂರ್ಯಜ ಯಕ್ಷಗಾನ ಕೃತಿ ಅಭಿನಂದನೀಯ ಎಂದು ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಕನ್ನಡ ಉಪನ್ಯಾಸಕ, ಯಕ್ಷಗಾನ ಕಲಾವಿದ ಎಚ್. ಸುಜಯೀಂದ್ರ ಹಂದೆ ಹೇಳಿದರು.
ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದವು ಕೈಲಾಸ ಕಲಾ ಟ್ರಸ್ಟ್ ತೆಕ್ಕಟ್ಟೆ ಮತ್ತು ಮಲ್ಯಾಡಿ ಲೈವ್ ಡಾಟ್ ಕಾಮ್ ಸಹಕಾರದೊಂದಿಗೆ ಶನಿವಾರ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ನೂತನ ರಂಗ ಚಾವಡಿಯ ಅನಾವರಣ ಹಾಗೂ ಪಾರಂಪಳ್ಳಿ ನರಸಿಂಹ ಐತಾಳರ ಪದ್ಮ ಸೂರ್ಯಜ ಯಕ್ಷಗಾನ ಕೃತಿಯ ಅನಾವರಣ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಇತ್ತೀಚೆಗೆ ಯುವ ಉತ್ಸಾಹಿ ಪ್ರಸಂಗ ಕವಿಗಳು ಅನೇಕ ಪ್ರಸಂಗ ಕೃತಿಗಳನ್ನು ರಚಿಸುತ್ತಿರುವುದು ಸ್ವಾಗತಾರ್ಹ. ಆದರೆ ಕನ್ನಡ ಕವಿ-ಸಾಹಿತ್ಯ ವಲಯದಲ್ಲಿ ಯಕ್ಷಗಾನ ಕೃತಿಗಳಿಗೆ, ಕವಿಗಳಿಗೆ ಸೂಕ್ತ ಮನ್ನಣೆ ದೊರಕದೇ ಇರುವುದು ವಿಷಾದನೀಯ ಎಂದು ಹೇಳಿದರು.
ನೂತನ ರಂಗ ಚಾವಡಿಯನ್ನು ದೀಪ ಬೆಳಗಿಸಿ ಅನಾವರಣಗೊಳಿಸಿದ ಕಲಾ ಪೋಷಕ, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ತೆಕ್ಕಟ್ಟೆಯ ಯಶಸ್ವಿ ಕಲಾವೃಂದವು ಈ ಭಾಗದಲ್ಲಿ ನಿರಂತರ ಕಲಾ ಸಾಹಿತ್ಯ ಚಟುವಟಿಕೆಗಳ ಮೂಲಕ ನಮ್ಮ ಮನಸ್ಸನ್ನು ಅರಳಿಸುವ ಕೆಲಸ ಮಾಡಿದೆ. ಮತ್ತಷ್ಟು ಕ್ರಿಯಾಶೀಲ ಚಟುವಟಿಕೆಗಳೊಂದಿಗೆ ಸಂಸ್ಥೆ ಉಜ್ವಲ ಭವಿಷ್ಯವನ್ನು ಕಾಣಲಿ ಎಂದು ಶುಭ ಹಾರೈಸಿದರು.
ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಕುಂದಾಪುರ ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ವೈದ್ಯ, ಉದ್ಯಮಿಗಳು, ಕಲಾ ಪೋಷಕರಾದ ರೊ. ಸುಧಾಕರ ಶೆಟ್ಟಿ, ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಕೃಷ್ಣ ಶೆಟ್ಟಿ ಶಾನಾಡಿ ಶುಭ ಹಾರೈಸಿದರು.
ಪಾರಂಪಳ್ಳಿ ನರಸಿಂಹ ಐತಾಳ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕೈಲಾಸ ಕಲಾಕ್ಷೇತ್ರ ಟ್ರಸ್ಟ್ನ ಅಧ್ಯಕ್ಷ ಕೊಯ್ಕೂರು ಸೀತಾರಾಮ ಶೆಟ್ಟಿ ದಾನಿಗಳನ್ನು ಅಭಿನಂದಿಸಿದರು. ಯಕ್ಷದೇಗುಲದ ಸುದರ್ಶನ ಉರಾಳ, ಭಾಗವತ ಹರೀಶ ಕಾವಡಿ, ಸುಬ್ರಮಣ್ಯ ಭಟ್, ಪ್ರಶಾಂತ್ ಮಲ್ಯಾಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವೆಂಕಟೇಶ ವೈದ್ಯ ಸ್ವಾಗತಿಸಿ, ಕೀರ್ತನ ಮಿತ್ತಂತಾಯ ವಂದಿಸಿದರು. ಅಧ್ಯಾಪಕ ಹಿರಿಯ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಾಚಾರ್ಯ ಕೆ.ಪಿ. ಹೆಗಡೆ, ಲಂಬೋದರ ಹೆಗಡೆ, ಕೂಡ್ಲಿ ದೇವದಾಸ ರಾವ್, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುಜನ್ ಹಾಲಾಡಿ, ಸುದೀಪ್ ಉರಾಳ, ಶಶಿಕಾಂತ ಶೆಟ್ಟಿ, ನರಸಿಂಹ ಗಾಂವಕರ್, ಸುಧೀರ್ ಉಪ್ಪೂರ್, ಆದಿತ್ಯ ಹೆಗಡೆ, ನವೀನ್, ಪ್ರಶಾಂತ್ ಆಚಾರ್, ರಾಘವೇಂದ್ರ ತುಂಗ, ಮನೋಜ್ ಮೊದಲಾದವರ ಕೂಡುವಿಕೆಯಲ್ಲಿ ಪದ್ಮ ಸೂರ್ಯಜ ಪ್ರದರ್ಶನ ನಡೆಯಿತು.
