ಉಡುಪಿ : ಪಣಿಯಾಡಿ ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಅನಂತ ಚತುದರ್ಶಿಯನ್ನು ವೈಭವೋಪೇತವಾಗಿ ಆಚರಿಸಲಾಯಿತು. ಕದಳೀ ಪ್ರಿಯ ಅನಂತ ಪದ್ಮನಾಭನಿಗೆ ಭಕ್ತರು ಅರ್ಪಿಸಿದ ಸುಮಾರು 80 ಕ್ಕೂ ಮಿಕ್ಕಿದ ಕದಳೀ ಗೊನೆಯಿಂದ ದೇವಳವನ್ನು ಶೃಂಗರಿಸಿ ಸಮರ್ಪಿಸಿ ಪೂಜಿಸಲಾಯಿತು. ವಿವಿಧ ವರ್ಣದ ಪರಿಮಳ ಪುಷ್ಟಗಳಿಂದ ಶ್ರೀದೇವಳವನ್ನು ಮತ್ತು ಶ್ರೀ ದೇವರನ್ನು ಅಲಂಕರಿಸಲಾಗಿದ್ದು, ತಿರುಪತಿಯ ಸೊಬಗು ಪಣಿಯಾಡಿಯಲ್ಲಿ ಬಿಂಬಿತವಾದಂತಿತ್ತು. ಮುಂಜಾನೆಯಿಂದ ರಾತ್ರಿಯವರೆಗೆ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕದಿರು ಕಟ್ಟುವ ಮೂಲಕ ಪ್ರಾರಂಭವಾಗಿ ಪ್ರಾತಃ ಪೂಜೆ, ಕದಳೀ ಪೂಜೆ, ವಿಷ್ಣು ಸಹಸ್ರನಾಮಾದಿ ಪಾರಾಯಣ, ವೇದ ಘೋಷ, ವನಿತೆಯರಿಂದ ಲಕ್ಷ್ಮೀ ಶೋಭಾನೆ, ಚಂಡೆನಾದ , ಮಹಾಪೂಜೆ, ಪಲ್ಲಪೂಜೆ, ಪಾನಕ ಸೇವೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಸಂಗೀತ ಕಾರ್ಯಕ್ರಮ, ಊರಿನ ಯುವಕರ ತಂಡದ ಕುಣಿತ ಭಜನೆ, ಅಂಬಲಪಾಡಿಯ ಮಹಿಳಾ ತಂಡದ ಕುಣಿತ ಭಜನೆ, ಊರಿನ ಮಹಿಳೆಯರಿಂದ ಭಜನೆ, ಸಾಯಂಕಾಲ ಹೂವಿನ ಪೂಜೆ, ರಂಗಪೂಜೆ,
ಅಷ್ಟಾವಧಾನಾದಿ ನೃತ್ಯ ಸೇವೆ ಮಂಗಳ ವಾದ್ಯಗಳಿಂದ ಊರ ಪರವೂರ ಭಕ್ತರ ದಿವ್ಯ ಉಪಸ್ಥಿತಿಯಲ್ಲಿ ಸುಸಂಪನ್ನಗೊಂಡಿತು.





































