ವರದಿ : ಬಿ.ಎಸ್.ಆಚಾರ್ಯ
ಬಾರಕೂರು :ಸತತ ಮೂರನೆ ಬಾರಿಗೆ ಗಾಂಧಿಗ್ರಾಮ ಪುರಸ್ಕಾರ ಪಡೆದ ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಸ್ತಿ ನಗರದಲ್ಲಿ ಮಹಾತ್ಮಾಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗಾಂಧಿ ಜಯಂತಿ ಆಚರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮಾತನಾಡಿ, ಸರಕಾರದ ಆದೇಶದ ಬಹುತೇಕ ಕೆಲಸಗಳನ್ನು ನಮ್ಮ ಗ್ರಾಮಪಂಚಾಯತಿ ಅನುಷ್ಠಾನ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ದಾಖಲೆ ಎನ್ನುವಂತೆ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. ಗ್ರಾಮದ ಅಭಿವೃದ್ಧಿ ಕೆಲಸದಲ್ಲಿ ಚುನಾಯಿತ ಸದಸ್ಯರುಗಳ ಏಕತೆಯ ನಿರ್ಧಾರ ಇದಕ್ಕೆ ಕಾರಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ಸ್ವಚ್ಚತೆಗಾಗಿ ಹೊಸ ವಾಹನದಿಂದ ತ್ಯಾಜ್ಯ ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಬೆಳೆದು ನಿಂದ ಹುಲ್ಲನ್ನು ಕಟಾವು ಮಾಡಲಾಯಿತು. ಎಲ್ಲಾ ಸದಸ್ಯರು ಸೇರಿ ಪರಿಸರವನ್ನು ಸ್ವಚ್ಚಗೊಳಿಸಿದರು. ಈ ಸಂದರ್ಭ ಅಭಿವೃದ್ದಿ ಅಧಿಕಾರಿ ಅರುಂಧತಿ ಏಸುಮನೆ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಉಮೇಶ ಕಲ್ಯಾಣಪುರ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.


