ವರದಿ : ದಿನೇಶ್ ರಾಯಪ್ಪನಮಠ
ಕೋಟ: ಚಿತ್ತಚಂಚಲೆ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕನಾಗಿ ಹೊರಹೊಮ್ಮಿದ ವೈಕು.ಸುಂದರ್ ನಿರ್ದೇಶನದ ಎರಡನೇ ಚಲನಚಿತ್ರದ ಆರಂಭಿಕ ಚಾಲನೆ ಕಾರ್ಯಕ್ರಮ ಕಾಜ್ರಲ್ಲಿ ವನದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನಡೆಯಿತು.
ಮೆಕ್ಕೆಕಟ್ಟು ಗಣೇಶೋತ್ಸವ ಸಮಿತಿ ಅಧಕ್ಷ ರಾಜಾರಾಮ್ ಶೆಟ್ಟಿ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು. ಶಿರಿಯಾರ ವ್ಯಾವಸಾಯಿಕ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಚಿತ್ರದ ಪೋಸ್ಟರ್ ನ ಕರಪತ್ರ ಬಿಡುಗಡೆಗೊಳಿಸಿದರು.
ಪತ್ರಕರ್ತ ರಾಜೇಶ್ ಗಾಣಿಗ ಅಚ್ಲಾಡಿ ಮಾತನಾಡಿ, ಇಂದು ಚಿತ್ರರಂಗ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಹಳ್ಳಿ-ಹಳ್ಳಿಗೂ ತಲುಪುತ್ತಿದೆ. ಗ್ರಾಮಾಂತರ ಭಾಗದಲ್ಲೂ ಉತ್ತಮ ನಿರ್ದೇಶಕರು, ನಟರು ತಯಾರಾಗುತ್ತಿದ್ದಾರೆ. ಅಂತಹ ನಿರ್ದೇಶಕರಲ್ಲಿ ವೈ.ಕು. ಸುಂದರ್ ಕೂಡ ಓರ್ವರು. ಇವರಲ್ಲಿ ಅಪೂರ್ವವಾದ ಪ್ರತಿಭೆ ಇದ್ದು ಉತ್ತಮ ಸಿನಿಮಾವನ್ನು ನಿರ್ಮಿಸುವಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಪ್ರೋತ್ಸಾಹ ಅವರಿಗೆ ಅಗತ್ಯವಾಗಿ ಬೇಕಿದೆ ಎಂದರು.
ಸಾಹೇಬ್ರಕಟ್ಟೆ ರೋಟರಿ ಅಧ್ಯಕ್ಷ ಪ್ರಸಾದ್ ಭಟ್, ಮಾಜಿ ಅಧ್ಯಕ್ಷ ಸಿರಿ ಭಟ್, ಉದ್ಯಮಿ ಸಂಕಯ್ಯ ಶೆಟ್ಟಿ, ದಿನೇಶ್ ಶೆಟ್ಟಿ, ಚಿತ್ರದ ನಟ ಕ್ಯಾದಗಿ ಮಹಾಬಲೇಶ್ವರ ಭಟ್ ಮುಂತಾದವರು ವೈಕು ಸುಂದರ್ ಅವರಿಗೆ ಶುಭ ಹಾರೈಸಿದರು.
ವಿದ್ವಾನ್ ಅಶೋಕ್ ಆಚಾರ್ಯ ಸಾಹೇಬ್ರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಕ್ಯಾದಗಿ ಮಹಾಬಲೇಶ್ವರ ಭಟ್ ಅಭಿನಯದ ಏಕವ್ಯಕ್ತಿ ಯಕ್ಷಗಾನ ಪುಷ್ಪಕ ವಿಮಾನ ಪ್ರದರ್ಶನ ಕಂಡಿತು.
