ಯುಎಪಿಎ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿರುವ ಪ್ರಕರಣದಲ್ಲಿ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಸೇರಿ ಪ್ರಮುಖ 7 ಆರೋಪಿಗಳಿಗೆ ಕೇರಳ ಹೈಕೋರ್ಟ್ ಜಾಮೀನು ನೀಡಿದೆ. ಈ ಮೂಲಕ ಎರ್ನಾಕುಲಂ ಎನ್ಐಎ ಪೀಠವು ಜಾಮೀನು ಅರ್ಜಿ ತಿರಸ್ಕರಿಸಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ಸ್ವಪ್ನಾ ಸುರೇಶ್, ಸರೀತ್ ಪಿ.ಎಸ್ ಅಲ್ಲದೆ ಮೊಹಮ್ಮದ್ ಶಫಿ ಪಿ, ಜಲಾಲ್ ಎ. ಎಂ ಹಮ್ಮದ್, ರಮೀಸ್ ಕೆ.ಟಿ, ಶರಾಫುದ್ದೀನ್ ಕೆ, ಮೊಹಮ್ಮದ್ ಅಲಿ ಎಂಬುವರಿಗೂ ಜಾಮೀನು ಸಿಕ್ಕಿದೆ. ಕೆಲವೊಂದು ಷರತ್ತುಗಳನ್ನು ಹಾಕಲಾಗಿದ್ದು, ಸ್ವಪ್ನ ಅವರು 25 ಲಕ್ಷ ರೂ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಿ ಜಾಮೀನು ಪಡೆದುಕೊಳ್ಳಲು ಸೂಚಿಸಲಾಗಿದೆ. ಪಾಸ್ ಪೋರ್ಟ್ ತನಿಖಾಧಿಕಾರಿಗಳ ವಶಕ್ಕೆ ನೀಡಬೇಕು. ಸಾಕ್ಷ್ಯಾಧಾರ ನಾಶ ಪಡಿಸುವಂತಿಲ್ಲ ತನಿಖೆಗೆ ಸಹಕರಿಸಬೇಕು ಮೊದಲಾದ ಷರತ್ತುಗಳನ್ನು ಹಾಕಲಾಗಿದೆ.
ಅಕ್ರಮ ಹಣ ವರ್ಗಾವಣೆ, ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಣೆ, ಕಾನೂನು ಬಾಹಿರ ಆರ್ಥಿಕ ವ್ಯವಹಾರ ಮುಂತಾದ ಆರೋಪಗಳನ್ನು ಹೊತ್ತುಕೊಂಡಿರುವ ಸ್ವಪ್ನ ಸುರೇಶ್ ಹಾಗೂ ಇತರೆ ಆರೋಪಿಗಳನ್ನು ಜಾರಿ ನಿರ್ದೇಶನಾಲಯವು ಕಳೆದ ವರ್ಷ ಜುಲೈನಲ್ಲಿ ಬಂಧಿಸಿತ್ತು. ಕಾನೂನು ಬಾಹಿರ ಆರ್ಥಿಕ ವ್ಯವಹಾರ UAPA ಕಾಯ್ದೆ ಉಲ್ಲಂಘನೆ ಮಾಡಿದ್ದ ಆರೋಪದ ಮೇಲೆ ಸೆಕ್ಷನ್ 16, 17, 18 ಹಾಗೂ 20ರ ಅಡಿ ಪ್ರಕರಣ ದಾಖಲಾಗಿತ್ತು.

