ಹೆಬ್ರಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೂರು ಗ್ರಾಮದ ನಾಲ್ಕೂರು ಕೈಯಿಟ್ಟು ಎಂಬಲ್ಲಿ ಮಂಗಳವಾರ ಸಂಜೆ ಬೊಲೆರೋ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಚಂದ್ರಶೇಖರಪ್ಪ ಹೊಸಳ್ಳಿ ಮತ್ತು ಸಹ ಸವಾರ ಮಹೇಶ್ ಎಂಬುವರು ಮದ್ದೂರು ಕಡೆಯಿಂದ ಕೊಕ್ಕರ್ಣೆ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕೈಯಿಟ್ಟು ಜಂಕ್ಷನ್ ಬಳಿ ಎದುರುಗಡೆಯಿಂದ ವೇಗವಾಗಿ ಬರುತ್ತಿದ್ದ ಬೊಲೆರೋ ವಾಹನ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದಾರೆ. ಚಂದ್ರಶೇಖರ ಹೊಸಳ್ಳಿ ಅವರಿಗೆ ತಲೆಗೆ ಮತ್ತು ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಹಸವಾರ ಮಹೇಶ್ ಇವರಿಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬೊಲೆರೋ ವಾಹನದ ಚಾಲಕ ಮಾಲಕ ವಿಜಯ್ ಕುಮಾರ್ ಶೆಟ್ಟಿ ಇವರ ಮೇಲೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆಯೆ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಶ್ರೀದತ್ತ ಹೆಬ್ರಿ
