ವರದಿ : ಬಿ.ಎಸ್. ಆಚಾರ್ಯ
ಬ್ರಹ್ಮಾವರ: ಎಲ್ಲೆಡೆ ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿಯವರ ಹೆಸರು ಮಾತ್ರ ಕೇಳಿಬರುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸಮರ್ಥರು ಮತ್ತು ನಿಷ್ಠಾವಂತರು ಮತ್ತು ದುಡ್ಡಿರುವವರ ಪೈಪೋಟಿ ಕಂಡು ಬರುತ್ತಿದೆ.
ಕಳೆದ ಬಾರಿ ಕಾಂಗ್ರೆಸ್ ಪಾರ್ಟಿಯಿಂದ ಹರಿಕೃಷ್ಣ ಬಂಟ್ವಾಳ್ ಮತ್ತು ಕೆ.ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಾರೀ ಕುತೂಹಲ ಮೂಡಿಸಿದರೂ ಪ್ರತಾಪಚಂದ್ರ ಶೆಟ್ಟರು ಆಯ್ಕೆಯಾಗಿದ್ದರು.
ಈ ಬಾರಿ ಬಿಜೆಪಿ ಎರಡು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚರ್ಚೆ ಇರುವಾಗಲೇ ಕಾಂಗ್ರೆಸ್ ಪಕ್ಷದಲ್ಲೇ ಹೆಚ್ಚು ಗುರುತಿಸಿಕೊಂಡಿದ್ದ ಸಹಕಾರಿ ಧುರೀಣ ಎಂ.ಎನ್ ರಾಜೇಂದ್ರ ಕುಮಾರ್ ಕೂಡಾ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಹಾಲಿ ಸದಸ್ಯರಾದ ಪ್ರತಾಪ್ ಚಂದ್ರ ಶೆಟ್ಟಿಯವರು ಸ್ಪರ್ಧೆಯಿಂದ ದೂರ ಇರುವುದಾಗಿ ಹೇಳಿದ ಕಾರಣ, ಕಾಂಗ್ರೆಸ್ನಿಂದ ಮೂರು ಹೆಸರುಗಳು ಕೇಳಿ ಬರುತ್ತಿದ್ದು ಬೈಂದೂರಿನ ಯು.ಬಿ. ಶೆಟ್ಟಿ , ಶಿವಮೊಗ್ಗದ ಮಂಜುನಾಥ ಭಂಡಾರಿಯವರು ಹಾಗೂ ಕರಾವಳಿ ಭಾಗದ ಕಾಂಗ್ರೆಸ್ ಕಟ್ಟಾಳು ಬ್ರಹ್ಮಾವರ ಭುಜಂಗ ಶೆಟ್ಟಿಯವರದು.
ಬ್ರಹ್ಮಾವರ ವಾರಂಬಳ್ಳಿ ಮಂಡಲ ಪಂಚಾಯತಿ ಅಧ್ಯಕ್ಷರಾಗಿ ರಾಜಕೀಯವಾಗಿ ಕಾಂಗ್ರೆಸ್ ನಿಂದ ದಿವಂಗತ ಓಸ್ಕರ್ ಫೆರ್ನಾಡಿಂಸ್ ರವರ ನಿಕಟ ಒಡನಾಡಿಯಾದ ಭುಜಂಗ ಶೆಟ್ಟಿಯವರು ಹಿಂದಿನಿಂದಲೂ ಬಡವರ ಪರವಾಗಿ ನಿಂತು ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಬೆಳೆಸುವಲ್ಲಿ ಶ್ರಮವಹಿಸಿದ ನಾಯಕರಾಗಿ ಗುರುತಿಸಿಕೊಂಡಿದ್ದರು.
ತಳ ಹಂತದ ಜನರೊಂದಿಗೆ ಬೆಳೆದ ಭುಜಂಗ ಶೆಟ್ಟಿಯವರು ಮತ್ತೆ ರಾಜಕೀಯವಾಗಿ ತಾಲೂಕು ಪಂಚಾಯತಿ ಸದಸ್ಯರಾಗಿ ಬಳಿಕ ಉಡುಪಿ ಜಿಲ್ಲೆ ಆಗುವ ಮೊದಲು ದಕ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಉಡುಪಿ ಜಿಲ್ಲೆ ಆದ ಬಳಿಕ ಉಡುಪಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಕರಾವಳಿಯ ಎರಡೂ ಜಿಲ್ಲೆಯನ್ನು ಬಲ್ಲವರಾಗಿದ್ದ ಕಾರಣ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರು ಭುಜಂಗ ಶೆಟ್ಟಿಯವರ ಪರ ಹೆಚ್ಚಿದ್ದಾರೆ.
ಭುಜಂಗ ಶೆಟ್ಟರು ಎಲ್ಲಾ ಪಕ್ಷದವರೊಂದಿಗೆ ಗೌರವದಿಂದ ಇರುವುದು ಸರಕಾರದ ಕಾಯ್ದೆ ಕಾನೂನುಗಳ ಬಗ್ಗೆ ತಳ ಮಟ್ಟದ ಅಧಿಕಾರಿಗಳಿಂದ ತೊಡಗಿ ಜಿಲ್ಲಾಧಿಕಾರಿಗಳೂ ಶೆಟ್ಟರಲ್ಲಿ ಸಲಹೆ ಕೇಳಿದ ಉದಾಹರಣೆಗಳಿವೆ,

ಸ್ವತಹ: ಕೃಷಿಕ ಭುಜಂಗ ಶೆಟ್ಟಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿದ್ದ ಸಮಯ ದಾಖಲೆಯಲ್ಲಿ ಕಬ್ಬು ಅರೆದ ಸಾಧನೆ ಇತ್ತು. ರಾಜಕೀಯಕ್ಕಾಗಿ ಲಾಭಿ ಮಾಡಲು ಕಲಿಯದ ಭುಜಂಗ ಶೆಟ್ಟಯವರು ಯಾವಾಗಲೋ ಎಂ ಎಲ್ ಏ ಆಗಿ ಮಂತ್ರಿಸ್ಥಾನ ಪಡೆಯಬೇಕಿತ್ತು. ಆದರೆ ಇಂದಿಗೂ ಬ್ರಹ್ಮಾವರ ತಾಲೂಕು ಕಛೇರಿ ಬಳಿ ಸಣ್ಣ ಕಛೇರಿ ಜನಸೇವಾ ಕೇಂದ್ರ ಮಾಡಿಕೊಂಡು ಬಡವರಿಗೆ ಸಿಗುವ ಸೌಲಭ್ಯಕ್ಕೆ ನಾನಾ ಇಲಾಖೆಗೆ ಅರ್ಜಿಗಳನ್ನ ಬರೆದುಕೊಟ್ಟು ಜನರಿಗೆ ದೊರಕಿಸಿ ಕೊಡುವ ಕೆಲಸ ಮಾಡುತ್ತಾರೆ.
ಇವರ ಜೊತೆಯಾಗಿದ್ದವರು ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿ ಸ್ಥಾನ ಮಾನ ಕಂಡುಕೊಂಡರೂ ಇವರು ಕಟ್ಟಾ ಕಾಂಗ್ರೇಸ್ ಪಕ್ಷಕ್ಕಾಗಿ ದುಡಿದ ಹಿನ್ನೆಲೆಯಲ್ಲಿ ಮತ್ತು ಕರಾವಳಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಇಂದಿಗೂ ಬಂಟ ಸಮುದಾಯವೇ ಪ್ರಬಲ ನಾಯಕತ್ವದ ಹಿನ್ನೆಲೆಯಲ್ಲಿ ಭುಜಂಗ ಶೆಟ್ಟರ ಹಿರಿತನ ಪಕ್ಷ ನಿಷ್ಠೆಗೆ ಕಾಂಗ್ರೇಸ್ ಪಕ್ಷ ಉಡುಪಿ ಜಿಲ್ಲೆಯ ಮಧ್ಯಭಾಗದಲ್ಲಿರುವ ಭುಜಂಗ ಶೆಟ್ಟರಿಗೆ ಅವಕಾಶ ನೀಡಿ ಗೆಲುವಿಗೆ ಶ್ರಮಿಸಬೇಕು ಎನ್ನುವುದು ಅವರ ಅಭಿಮಾನಿಗಳ ಬಯಕೆಯಾಗಿದೆ.

