ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಿದ್ಯೆಯೇ ಶ್ರೇಷ್ಠವಾದ ಸಂಪತ್ತು. ಅದಕ್ಕಿರುವ ಬೆಲೆ ಪ್ರಪಂಚದಲ್ಲಿ ಬೇರೆ ಯಾವುದಕ್ಕೂ ಇಲ್ಲ, ಉಳಿದ ಎಲ್ಲವೂ ಕ್ಷಣಿಕ ಮತ್ತು ನಶ್ವರ ಎಂದು ಗೋವಾದ ಕೊಂಕಣ ರೈಲ್ವೆ ಉದ್ಯೋಗಿ ಸಂತೋಷ ಪೂಜಾರಿ ಹೇಳಿದರು.
ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಮಾಸ್ತಿದುರ್ಗಾ ಚಿಣ್ಣರ ಬಳಗದ ಮಕ್ಕಳಿಗೆ ಅರ್ಚಕರು ಕೊಡಮಾಡುವ 15 ನೇ ವರ್ಷದ ದಿ. ಲಕ್ಷ್ಮೀನಾರಾಯಣಯ್ಯ ದತ್ತಿ ನಿಧಿ ವಿತರಿಸಿ ಅವರು ಮಾತನಾಡಿದರು.

ಇಂತಹ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪ್ರತಿ ದೇವಸ್ಥಾನದಲ್ಲಿ ಆದಲ್ಲಿ ಮುಂದೊಂದು ದಿನ ಭಾರತ ಮೌಲ್ಯಯುತ ಹಾಗೂ ಸಂಸ್ಕಾರ ಯುತ ಶ್ರೇಷ್ಠ ದೇಶ ಆಗಲಿದೆ, ಅದಕ್ಕಾಗಿ ಮಕ್ಕಳೆಲ್ಲರೂ ವಿದ್ಯಾವಂತರಾಗಿ ಎಂದು ಹಿತನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹನೆಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಎಸ್. ಪೂಜಾರಿ ಮಾತನಾಡಿ, ಮಕ್ಕಳು ಕೇವಲ ಪಠ್ಯದ ಹಿಂದೆ ಬೀಳದೇ ಇಂತಹ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಚುಟುವಟಿಕೆಲ್ಲೂ ಧೈರ್ಯದಿಂದ ಮುಂದುವರಿಯಬೇಕೆಂದು ಹೇಳಿದರು. ಹಾಗೆಯೇ ನೀವು ಇಂದು ಪಡೆದ ಹಣ ನೀವು ಉದ್ಯೋಗ ಪಡೆದ ಮೇಲೆ ಅಗತ್ಯ ಬಡಮಕ್ಕಳಿಗೆ ಹಂಚಬೇಕು ಎಂದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸುರೇಶ್ ಸುಭಾನು, ಮಕ್ಕಳ ರಕ್ಷಕರು ಉಪಸ್ಥಿತರಿದ್ದರು. ಚಿಣ್ಣರ ಬಳಗದ ಅಧ್ಯಕ್ಷ ಅನಂತಪದ್ಮನಾಭ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಚಿಣ್ಣರ ಬಳಗದ ನಿರ್ದೇಶಕ ರಾಘವೇಂದ್ರ ರಾವ್ ವಂದಿಸಿದರು. ಅನಂತರ ಮಕ್ಕಳ ಕುಣಿತದ ಭಜನೆ ಜರುಗಿತು.


































