ವರದಿ : ದಿನೇಶ್ ರಾಯಪ್ಪನಮಠ
ಉಡುಪಿ: ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಸಮಾರಂಭವು ಜಿಲ್ಲಾ ಗೃಹ ರಕ್ಷಕ ದಳದ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಅಥಿತಿಯಾಗಿ ಭಾಗವಹಿಸಿದ ಭಾರತೀಯ ವೈದ್ಯಕೀಯ ಸಂಘ ಉಡುಪಿ, ಕರಾವಳಿ ಶಾಖೆಯ ಅಧ್ಯಕ್ಷ ಡಾ.ವಿನಾಯಕ ಶೆಣೈ ಮಾತನಾಡಿ ದೇಶ ರಕ್ಷಣೆ ಮಾಡುವ ಸೈನಿಕರ ರೀತಿಯಲ್ಲಿ ಹೋಂ ಗಾರ್ಡ್, ಪೊಲೀಸ್ ಇಲಾಖೆ ಆಂತರಿಕ ಭದ್ರತೆಯನ್ನು ಕಾಪಾಡುತ್ತದೆ. ಹೋಮ್ ಗಾರ್ಡ್ ನವರ ಸೇವೆ ನಿಜಕ್ಕೂ ಮೆಚ್ಚವಂತಹದ್ದು. ಮಳೆ, ಗಾಳಿ, ಬಿಸಿಲೆನ್ನದೆ ನಿರಂತರವಾಗಿ ಸೇವೆ ನೀಡುವ ನಿಮಗೆ ಸರಕಾರ ಉತ್ತಮ ಸೌಲಭ್ಯಗಳನ್ನು ನೀಡಬೇಕು ಎಂದರು.

ಬಹುಮಾನ ವಿತರಿಸಿದ ಮಾತನಾಡಿದ ಅಂತಾರಾಷ್ಟ್ರೀಯ ಕ್ರೀಡಾಪಟು ಶಾಲಿನಿ ಶೆಟ್ಟಿ, “ಸರಕಾರದಿಂದ ಕ್ರೀಡಾ ಕ್ಷೇತ್ರಕ್ಕೆ ಯಾವುದೇ ಹೆಚ್ಚಿನ ಪ್ರೊತ್ಸಾಹ ಸಿಗುತ್ತಿಲ್ಲ. ಹಲವಾರು ಸಂದರ್ಭದಲ್ಲಿ ಕ್ರೀಡಾಪಟುಗಳ ಹೆತ್ತವರೇ ಸ್ವಂತ ಖರ್ಚಿನಿಂದ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳಿಗೆ ಭಾಗವಹಿಸಲು ಅವಕಾಶ ಮಾಡಿ ಕೊಡುತ್ತಾರೆ. ನಾನು ಈಗ ಉಡುಪಿಯಲ್ಲಿ ಕೆಲವೊಂದು ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತಿದ್ದೇನೆ. ಇದರಲ್ಲಿ ಓರ್ವ ಕ್ರೀಡಾಪಟು ವನ್ನಾದರೂ ಒಲಂಪಿಕ್ಸ್ ಗೆ ಕಳುಹಿಸಬೇಕು ಎನ್ನುವ ಮಹದಾಸೆ ನನಗಿದೆ” ಎಂದರು.
ಗೃಹರಕ್ಷಕ ದಳ ಜಿಲ್ಲಾ ಕಮಾಂಡೆಂಟ್ ಡಾ. ಕೆ. ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿ, ಸೆಕೆಂಡ್ ಇನ್ ಕಮಾಂಡೆಂಟ್ ಕೆ.ಸಿ.ರಾಜೇಶ್ ವಂದಿಸಿದರು. ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.
