ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ‘ಅಶಿಸ್ತಿನ ವರ್ತನೆ’ ಮತ್ತು ಸದನ ನಿಯಮ ಉಲ್ಲಂಘನೆ ಆರೋಪದ ಮೇಲೆ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಹನ್ನೆರಡು ವಿರೋಧ ಪಕ್ಷದ ಸಂಸದರನ್ನ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ಮುಂಗಾರು ಅಧಿವೇಶನ ಆರಂಭವಾಗುವುದಕ್ಕೂ ಒಂದು ದಿನದ ಮುಂದಷ್ಟೇ ಬಹಿರಂಗವಾಗಿದ್ದ ಪೆಗಾಸಸ್ ಹಗರಣದ ಸುದ್ದಿಯು ಮುಂಗಾರು ಅಧಿವೇಶನದಲ್ಲಿ ಭಾರೀ ಗದ್ದಲವನ್ನು ಸೃಷ್ಟಿ ಮಾಡಿದ್ದವು. ಇಸ್ರೇಲಿನ ಪೆಗಾಸಸ್ ತಂತ್ರಾಂಶವನ್ನು ಬಳಸಿ ಬೇಹುಗಾರಿಕೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಭಾರೀ ಗದ್ದಲವನ್ನು ಎಬ್ಬಿಸಿದ್ದವು.
ರಾಜ್ಯಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕುರ್ಚಿಗಳನ್ನು ಎಳೆದಾಡಿ, ನಾಮಫಲಕಗಳನ್ನು ಪ್ರದರ್ಶಿಸುತ್ತಾ ಗದ್ದಲ ಸೃಷ್ಟಿಸಲಾಗಿತ್ತು. ಆ ಸಂದರ್ಭದಲ್ಲೇ ಹಲವಾರು ಮಂದಿ ಸಂಸದರನ್ನು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅಮಾನತು ಮಾಡಿದ್ದರು. ತೃಣಮೂಲ ಕಾಂಗ್ರೆಸ್ ಪಕ್ಷದ ಡೋಲಾ ಸೇನ್, ಮೊಹಮ್ಮದ್ ನಬೀಮುಲ್, ಅಬಿರ್ ರಂಜನ್ ಬಿಸ್ವಾಸ್, ಶಾಂತ ಛೆತ್ರಿ, ಅರ್ಪಿತಾ ಘೋಷ್, ಮೌಸಮ್ ನೂರ್ ಎಂಬ ಆರು ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಈಗ ಮುಂಗಾರು ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಆರೋಪದಲ್ಲಿ ಹನ್ನೆರಡು ಮಂದಿ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ಅಮಾನತುಗೊಂಡವರು:
ಎಲಮರಮ್ ಕರೀಮ್ (ಸಿಪಿಎಂ), ಫುಲೋ ದೇವಿ ನೇತಮ್ (ಐಎನ್ ಸಿ), ಛಾಯಾ ವರ್ಮಾ (ಐಎನ್ ಸಿ), ರಿಪುನ್ ಬೋರಾ (ಐಎನ್ ಸಿ), ಬಿನೋಯ್ ವಿಸ್ವಾಮ್ (ಸಿಪಿಐ), ರಾಜಮಣಿ ಪಟೇಲ್ (ಐಎನ್ ಸಿ), ಡೋಲಾ ಸೇನ್ (ಟಿಎಂಸಿ), ಶಾಂತಾ ಛೆಟ್ರಿ (ಟಿಎಂಸಿ), ಸೈಯದ್ ನಾಸಿರ್ ಹುಸೇನ್ (ಐಎನ್ ಸಿ), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ), ಅನಿಲ್ ದೇಸಾಯಿ (ಶಿವಸೇನೆ) ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ (ಐಎನ್ ಸಿ).
