ವರದಿ : ದಿನೇಶ್ ರಾಯಪ್ಪನಮಠ
ಕೋಟ: ತಮ್ಮ ಪೂರ್ವಜರ ನೆನಪಿನಲ್ಲಿ ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಪರಿಪಾಟ ಅನುಸರಣೀಯ. ಈ ನಿಟ್ಟಿನಲ್ಲಿ ಕಳೆದ ಎಂಟು ವರ್ಷಗಳಿಂದ ಉಪಾಧ್ಯ ಕುಟುಂಬದವರು ಯಕ್ಷಗಾನದ ಅಶಕ್ತ ಕಲಾವಿದರಿಗೆ ಮಾಡುತ್ತಿರುವ ಸಹಾಯ ಶ್ಲಾಘನೀಯ. ಇಂತಹ ತುಂಬು ಮನಸ್ಸಿನ ಕಲಾಪ್ರೇಮಿಗಳಿಂದಾಗಿ ಯಕ್ಷಗಾನ ಕಲಾವಿದರು ದೈರ್ಯದಿಂದ ಬದುಕುವಂತಾಗಿದೆ. ಯಕ್ಷಗಾನ ಕಲಾಕೇಂದ್ರವು ಸದುದ್ದೇಶವನ್ನು ಹೊಂದಿ ಕಲಾಭಿಮಾನಿಗಳನ್ನು ಸೇರಿಸಿಕೊಂಡು ಮಾಡುತ್ತಿರುವ ಕಾರ್ಯ ಮೆಚ್ಚುವಂತದ್ದು ಎಂದು ನಿವೃತ್ತ ಅಧ್ಯಾಪಕ ರಂಗಪ್ಪಯ್ಯ ಹೊಳ್ಳ ಅಭಿಪ್ರಾಯಪಟ್ಟರು.
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇವರು ಆಯೋಜಿಸಿದ್ದ ದಿ| ಶಂಕರನಾರಾಯಣ ಉಪಾಧ್ಯರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತಾನಾಡುತ್ತಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.

ರಾಮಚಂದ್ರ ಐತಾಳರು ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಉಪಾಧ್ಯ ಕುಟುಂಬದ ರವೀಂದ್ರ ಶಂಕರ ಉಪಾಧ್ಯ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ನಂತರ ಹಿರಿಯ ವೃತ್ತಿ ಕಲಾವಿದರಿಂದ ನಳ-ದಮಯಂತಿ ಎಂಬ ಯಕ್ಷಗಾನ ಪ್ರದರ್ಶನ ನಡೆಸಲಾಯಿತು.



































