ವರದಿ: ದಿನೇಶ್ ರಾಯಪ್ಪನಮಠ
ಕೋಟ: ಎಂದೂ ಹೆಸರಿಗಾಗಿ, ಪ್ರಶಸ್ತಿಗಾಗಿ ನಾನು ಕೆಲಸ ಮಾಡಿದವನೇ ಅಲ್ಲ. ಅಧ್ಯಾಪನದ ಆಚೆಗೂ ಸಮೂಹದ ನಡುವೆಯೇ ಆಕರ್ಷಿಸಿದ ಪ್ರತಿಯೊಂದು ವಿಷಯದ ಕುರಿತೂ ಸದಾ ಅಧ್ಯಯನಶೀಲನಾಗಿರುತ್ತಿದ್ದೆ. ಅಭ್ಯಸಿಸಿದ್ದನ್ನ ನನ್ನದೇ ಆದ ಭಿನ್ನ ನಡೆಯಲ್ಲಿ ಕೊಡಲು ಪ್ರಯತ್ನಿಸುತ್ತಿದ್ದೆ. ಅದು ಯಶಸ್ವಿಯೂ ಆಯಿತು. ಮತ್ತೆಲ್ಲವೂ ಅದಾಗಿಯೇ ನನ್ನನ್ನು ಕೂಡಿಕೊಂಡಿತು ಎಂದು ಸಂಘಟಕ, ನಿರ್ದೇಶಕ ಹಾಗೂ ಜಗದ್ಘುರು ಕೃಪಾಪೋಷಿತ ಮಕ್ಕಳಮೇಳ ಸಾಲಿಗ್ರಾಮ ಇದರ ಸಂಸ್ಥಾಪಕರಾದ ಎಚ್. ಶ್ರೀಧರ ಹಂದೆ ನುಡಿದರು.
ಅವರು ಇತ್ತೀಚೆಗೆ ರಸರಂಗ ಕೋಟ ಸಮಸ್ತರು ರಂಗಸಂಶೋಧನಾ ಕೇಂದ್ರ ಬೆಂಗಳೂರು ಇದರ ಸಹಯೋಗದಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪ ಗುಂಡ್ಮಿಯಲ್ಲಿ ಆಯೋಜಿಸಿದ್ದ ಇವ ನಮ್ಮವ ರಂಗಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಧ್ಯಾಪಕನೇ ಇರಲಿ, ಕಲಾವಿದನೇ ಇರಲಿ, ಮೊದಲು ತಾನು ಅಭ್ಯಸಿಸಿ ನಂತರವೇ ಪ್ರಯೋಗಕ್ಕೆ ಮುಂದಾಗಬೇಕು ಎಂದರು. ಇಡೀ ಸಮುದಾಯವನ್ನು ಒಂದಾಗಿಸಿ, ಎಲ್ಲರನ್ನೂ ಸಮಭಾವದಿಂದ ತನ್ನವರನ್ನಾಗಿಸಿಕೊಂಡು ಕಾರ್ಯಪ್ರವರ್ತರಾಗಿದ್ದುದರಿಂದಲೇ ಹಂದೆಯವರು ಇಂದಿಗೂ ಸರ್ವಮಾನ್ಯರಾಗಿದ್ದಾರೆ. ಎಂದು ಗೋಷ್ಠಿಯ ಅಧ್ಯಕ್ಷರಾಗಿದ್ದ ರಾಷ್ಟ್ರೀಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ನುಡಿದರು.
ಸಂವಾದಕ ಮಿತ್ರರಾಗಿ ಪ್ರೊ. ಉಪೇಂದ್ರ ಸೋಮಯಾಜಿ, ರಂಗಪ್ಪಯ್ಯ ಹೊಳ್ಳ, ರಾಮದೇವ ಐತಾಳ್, ಜಾನ್ಹವಿ ಹೇರಳೆ, ಶಿವಾನಂದ ಮಯ್ಯ, ನವೀನ್ ಕೋಟ ಸಹಕರಿಸಿದರು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಕಾರ್ಯಕ್ರಮ ನಿರೂಪಿಸಿದರು.
