ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚುವಷ್ಟು ಗಂಭೀರ ಸ್ಥಿತಿ ಇಲ್ಲ. ಹಾಗಾಗಿ ಶಾಲೆಗಳಿಗೆ ಹೊಸದಾಗಿ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲ. ಹಿಂದೆ ಇದ್ದ ಮಾರ್ಗಸೂಚಿಗಳೇ ಮುಂದುವರೆಯುತ್ತವೆ. ಮಾರ್ಗಸೂಚಿಗಳ ಪಾಲನೆ ಬಗ್ಗೆ ಬಿಇಒ, ಟಿ ಹೆಚ್ ಒಗಳು ಮೇಲ್ವೀಚಾರಣೆ ಮಾಡಬೇಕು ಎಂದಿದ್ದಾರೆ.
ಕಳೆದ ಎರಡು ದಿನಗಳಿಂದ ಕೋವಿಡ್ ಇಳಿಮುಖವಾಗಿದೆ. ಶಾಲೆಗಳಲ್ಲಿ ಕೂಡಾ 1 ರಿಂದ10 ನೇ ತರಗತಿಯ ಮಕ್ಕಳಿಗೆ ಪಾಸಿಟಿವ್ ಕಂಡು ಬಂದಿಲ್ಲ. ಪಿಯು ಕಾಲೇಜುಗಳಲ್ಲಿ ಅಷ್ಟೇ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿದೆ. ಶಾಲೆ ಪುನಾರಂಭ ಆಗಿದ್ದು ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರುತ್ತಿದ್ದಾರೆ ಎಂದರು.

ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಕೋವಿಡ್ ಜಾಸ್ತಿ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಅಧ್ಯಯನ ಮಾಡಿ ಕ್ಯಾಬಿನೆಟ್ ಮುಂದೆ ವರದಿ ನೀಡಿದ್ದಾರೆ. ವಸತಿ ಶಾಲೆ ಹಾಗೂ ಹಾಸ್ಟೆಲ್ ನಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಹಾಗೂ ಬಿಇಓ ನೇತೃತ್ವದಲ್ಲಿ ಜಂಟಿ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿ ನಿತ್ಯ ವಸತಿ ಶಾಲೆ ಹಾಗೂ ಹಾಸ್ಟೆಲ್ ಗಳಿಗೆ ತೆರಳಿ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗುತ್ತದೆ.
2 ಡೋಸ್ ಲಸಿಕೆ ಪಡೆಯದಿದ್ದರೆ ಶಾಲೆಗಳಿಗೆ ಪ್ರವೇಶವಿಲ್ಲ ಎಂಬ ನಿಯಮ ತರಲು ಸಾಧ್ಯವಿಲ್ಲ. ನಾವು ಜಾಗೃತಿ ಮೂಡಿಸಬಹುದಷ್ಟೇ. ಶಾಲೆಗಳನ್ನು ಮುಚ್ಚುವಷ್ಟು ಗಂಭೀರ ಸ್ಥಿತಿ ಇಲ್ಲ. ಹೀಗಾಗಿ ಶಾಲೆಗಳಿಗೆ ಹೊಸದಾಗಿ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಹೇಳಿದ್ದಾರೆ.
