ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸರಕಾರಿ ಬೊಕ್ಕಸ ಮತ್ತು ಅಧಿಕಾರಿಗಳ ನೌಕರರ ದುರುಪಯೋಗವಾಗುತ್ತಿರುವ ವಿಧಾನ ಪರಿಷತ್ ಚುನಾವಣೆ ಎನ್ನುವ ಪ್ರಕ್ರಿಯೆಗೆ ಬೇಕು ಹೊಸ ಕಾಯಕಲ್ಪ ಎನ್ನುವ ಮಾತು ಬಹುತೇಕ ಭಾಗದಲ್ಲಿ ಕೇಳಿಬರುತ್ತಿದೆ.
ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಮಾಧ್ಯಮ ವರದಿಗಾರರು ಶುಕ್ರವಾರ ನಡೆದ ಚುನಾವಣೆಯ ಬಹುತೇಕ ಮತದಾನ ಕೇಂದ್ರವನ್ನು ಭೇಟಿ ನೀಡಿದಾಗ ಅದಕ್ಕೆ ಸಾಕ್ಷಿ ಯಾಗಿದೆ.

ಇಲ್ಲಿ ಅತೀ ಹೆಚ್ಚು 26 ಸದಸ್ಯರನ್ನು ಹೊಂದಿದ ಚಾಂತಾರು ಗ್ರಾಮ ಪಂಚಾಯತಿಯಲ್ಲಿ ಮತದಾನದ ಪ್ರಕ್ರಿಯೆ 11 ಗಂಟೆಗೆ ಮುಗಿದಿತ್ತು.
ಅದೇ ರೀತಿಯಲ್ಲಿ 18 ಸದಸ್ಯ ಬಲದ ವಾರಂಬಳ್ಳಿ ಗ್ರಾಮ ಪಂಚಾಯತಿ ಹಾಗೂ 18 ಸದಸ್ಯಬಲದ ಹಂದಾಡಿ ಗ್ರಾಮ ಪಂಚಾಯತಿಯಲ್ಲಿ ಕೂಡಾ ಬೆಳಿಗ್ಗೆ 11 ಗಂಟೆಯ ಒಳಗೆ ಮತದಾನ ಮುಗಿದಿತ್ತು.

ಆದರೆ ಪ್ರತಿಯೊಂದು ಮತಗಟ್ಟೆಗಳಿಗೆ ಚುನಾವಣಾ ಅಧಿಕಾರಿ, ಪೊಲೀಸ್ ಮತ್ತು ಸಿಬ್ಬಂದಿಗಳು ಎಂದು 6 ಸರಕಾರಿ ನೌಕರರು ಮತ್ತು ಪ್ರತೀ ಮತದಾನ ಕೇಂದ್ರಕ್ಕೆ ಛಾಯಾಗ್ರಾಹಕರು ಕೂಡಾ ಇದ್ದು, ಮತದಾನ ಮುಗಿದರೂ ಕೂಡಾ ಸಂಜೆ 4 ಗಂಟೆ ತನಕ ಕರ್ತವ್ಯದಲ್ಲಿ ಇರಬೇಕು.
ಇದಕ್ಕೆ ಬದಲಾಗಿ ತಾಲೂಕು ಪಂಚಾಯತಿ ವ್ಯಾಪ್ತಿ ಅಥವಾ ಹೋಬಳಿ ಮಟ್ಟದಲ್ಲಿ ಮತದಾನ ನಡೆಸಿದಲ್ಲಿ ಸರಕಾರದ ಅದೆಷ್ಟೋ ಹಣ ಮತ್ತು ಸರಕಾರಿ ನೌಕರರ ಶ್ರಮ ಉಳಿತಾಯವಾಗಲಿದೆ.
ಆ ಕುರಿತು 40 ವರ್ಷದಿಂದ ಗ್ರಾಮ ಪಂಚಾಯತಿ ಸದಸ್ಯರಾದ ಹಿರಿಯ ಗ್ರಾಮ ಪಂಚಾಯತಿ ಸದಸ್ಯರೋರ್ವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯರು ರಾಜಕೀಯ ಪಕ್ಷ ರಹಿತವಾಗಿದ್ದರೂ ಕೂಡಾ ಇಲ್ಲಿನ ಕೆಲವು ಮತದಾನ ಕೇಂದ್ರದಲ್ಲಿ ಪಕ್ಷದ ಬೆಂಬಲ ಇರುವವರು ಪ್ರತ್ಯೇಕವಾಗಿ ಗುಂಪುಗಳಾಗಿ ಗುರುತಿಸಿಕೊಂಡರೆ, ಮುಖಂಡರುಗಳು ಭೇಟಿ ನೀಡಿದಾಗ 2 ಪಕ್ಷಗಳ ಮುಖಂಡರುಗಳು ಸ್ನೇಹ ಹಸ್ತ ನೀಡುತ್ತಿರುವುದು ಕಂಡು ಬಂತು.

ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಮತ್ತು ವೃತ್ತ ನೀರೀಕ್ಷಕ ಅನಂತ ಪದ್ಮನಾಭರು ಸಿಬ್ಬಂದಿಗಳೊಂದಿಗೆ ಮತದಾನ ಕೇಂದ್ರಕ್ಕೆ ಬೇಟಿ ನೀಡಿದ್ದಾರೆ.
ಬಹತೇಕ ಬಾಗದಲ್ಲಿ ಶಾಂತ ರೀತಿಯಲ್ಲಿ ಮತದಾನ ನಡೆದಿದೆ.
