ವರದಿ : ದಿನೇಶ್ ರಾಯಪ್ಪಮಠ
ಬೈಂದೂರು: ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ವಾಹನಕ್ಕೆ ಸರಕಾರದಿಂದ ಸಿಬ್ಬಂದಿ ನೇಮಕವಾಗುವ ತನಕ ತಾತ್ಕಾಲಿಕವಾಗಿ ನೇಮಿಸುವ ಓರ್ವ ಚಾಲಕನಿಗೆ ಮಾಸಿಕ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಡೀಸೆಲ್ ವೆಚ್ಚವನ್ನು ಭರಿಸಿಕೊಡಲು ಉಪ್ಪುಂದ ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಮುಂದೆ ಬಂದಿದ್ದಾರೆ.
ಸಿಬ್ಬಂದಿಯ ವೇತನ ಹಾಗೂ ಡಿಸೇಲ್ ವೆಚ್ಚ ಭರಿಸಲು ನೆರವಾಗುವಂತೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಅವರು ಟ್ರಸ್ಟ್’ಗೆ ಮನವಿ ಸಲ್ಲಿಸಿದ್ದರು. ಇದ್ದಕ್ಕೆ ಸ್ಪಂದಿಸಿದ ಗೋವಿಂದ ಬಾಬು ಪೂಜಾರಿ ಅವರು, ಒಪ್ಪಿಗೆ ಪತ್ರವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು.


ಬಳಿಕ ಮಾತಾಡಿದ ಅವರು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಬಡಜನರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಆಗಬೇಕು. ಡಿಹೆಚ್ಓ ಅವರ ಮನವಿಯನ್ನು ಒಪ್ಪಿ ಓರ್ವ ಚಾಲಕನ ಮಾಸಿಕ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಕನಿಷ್ಠ ಡಿಸೇಲ್ ವೆಚ್ಚವನ್ನು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಭರಿಸಲಾಗುವುದು. ಅಗತ್ಯವಿದ್ದರೆ ಇನ್ನೋರ್ವ ಚಾಲಕನ ವೇತನ ನೀಡಲು ಟ್ರಸ್ಟ್ ಸಿದ್ಧವಿರುವುದಾಗಿಯೂ ತಿಳಿಸಿದರು.

ಈ ಸಂದರ್ಭ ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಉಮೇಶ್ ನಾಯಕ್, ಟ್ರಸ್ಟ್ ಸದಸ್ಯ ಸುಧಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
