ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಇಂದು ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಆಕೆಯ ಅಸ್ವಸ್ಥ ತಾಯಿ ಪದ್ಮಾವತಿ ಅವರ ಮನವಿಯನ್ನು ತಮಿಳುನಾಡು ಸರ್ಕಾರ ಪರಿಗಣಿಸಿ, ಗುರುವಾರ ಪೆರೋಲ್ ಮಂಜೂರು ಮಾಡಿತ್ತು.
ಪದ್ಮಾವತಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಗುರುವಾರ ಮದ್ರಾಸ್ ಹೈಕೋರ್ಟ್ನಲ್ಲಿ ಸರ್ಕಾರಿ ವಕೀಲರು ರಾಜ್ಯ ಸರ್ಕಾರದ ನಿರ್ಧಾರವನ್ನು ಬಹಿರಂಗಪಡಿಸಿದರು. ವಯಸ್ಸಿಗೆ ಸಂಬಂಧಿಸಿದ ಕಾರಣಗಳನ್ನು ಉಲ್ಲೇಖಿಸಿ, ತನ್ನ ಮಗಳಿಗೆ ಪೆರೋಲ್ ನೀಡಲು ರಾಜ್ಯ ಗೃಹ ಕಾರ್ಯದರ್ಶಿಗೆ ನಿರ್ದೇಶನ ನೀಡುವಂತೆ ಅವರು ನ್ಯಾಯಾಲಯವನ್ನು ಕೋರಿದರು.
ನ್ಯಾಯಮೂರ್ತಿಗಳಾದ ಪಿ ಎನ್ ಪ್ರಕಾಶ್ ಮತ್ತು ಆರ್ ಹೇಮಲತಾ ಅವರ ವಿಭಾಗೀಯ ಪೀಠವು ಒಂದು ತಿಂಗಳ ಸಾಮಾನ್ಯ ಪೆರೋಲ್ ನೀಡುವ ರಾಜ್ಯದ ನಿರ್ಧಾರದ ನಂತರ ಅರ್ಜಿಯನ್ನು ಮುಕ್ತಾಯಗೊಳಿಸಿತು.
1991 ರಲ್ಲಿ ಬಂಧನಕ್ಕೊಳಗಾದ ನಂತರ ಇದು ನಳಿನಿ ಅವರ ಎರಡನೇ ಸಾಮಾನ್ಯ ಪೆರೋಲ್ ಆಗಿದೆ.
1991ರ ಮೇ 21 ರಂದು ತಮಿಳುನಾಡಿನಲ್ಲಿ ಚುನಾವಣೆ ರ್ಯಾಲಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಳಿನಿ, ಅವರ ಪತಿ ಮುರುಗನ್ ಸೇರಿ ಒಟ್ಟು ಏಳು ಮಂದಿಯನ್ನು ಕೋರ್ಟ್ ಅಪರಾಧಿಗಳು ಎಂದು ಘೋಷಿಸಿತ್ತು. ಎಲ್ಲರಿಗೂ ಗಲ್ಲು ಶಿಕ್ಷೆ ಪ್ರಕಟವಾಗಿತ್ತು. ನಂತರ ಇದನ್ನ ಜೀವಿತಾವಧಿ ಶಿಕ್ಷೆಯಾಗಿ ಮಾರ್ಪಾಟು ಮಾಡಲಾಗಿತ್ತು.
ಸದ್ಯ ನಳಿನಿ ಶ್ರೀಹರನ್ ವೆಲ್ಲೂರಿನ ಮಹಿಳಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ 29 ವರ್ಷಗಳಿಂದ ನಳಿನಿ ಶ್ರೀಹರನ್ ಕಾರಾಗೃಹದಲ್ಲಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, nalini, Rajeev Gandhi murder case

Click to comment