ವರದಿ : ದಿನೇಶ್ ರಾಯಪ್ಪನಮಠ
ಕೋಟ: ಸಮಾಜ ಕಂಡ ಅಸಾಧಾರಣ ಮೇಧಾವಿ ದಿವಂಗತ ಪ್ರೋ| ಎಂ ಎ ಹೆಗಡೆಯವರು. ಪರಿಪೂರ್ಣ ಮನಸ್ಸಿನ ವ್ಯಕ್ತಿಯಾಗಿದ್ದರು. ಸಮಸ್ಯೆಯಲ್ಲಿರುವ ಸಂಸ್ಥೆ ಹಾಗೂ ಕಲಾವಿದರಿಗೆ ತಮ್ಮಿಂದಾದ ಸಹಾಯ ಮಾಡುತ್ತಿದ್ದರು. ಹೆಗಡೆಯವರ ಕಾಲದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ತನ್ನ ಇರುವನ್ನು ಕ್ಷೇತ್ರಕ್ಕೆ ತೋರ್ಪಡಿಸಿತ್ತು. ಇಂತಹ ಉತ್ಕøಷ್ಟ ವ್ಯಕ್ತಿತ್ವದ ಪ್ರೋ|ಎಂ ಎ ಹೆಗಡೆಯವರು ಸದಾ ಅಜರಾಮರ ಎಂದು ಖ್ಯಾತ ಯಕ್ಷಗಾನ ವಿದ್ವಾಂಸ ಪೂಕಳ ಲಕ್ಷ್ಮೀನಾರಾಯಣ ಭಟ್ಟ ಅಭಿಪ್ರಾಯ ಪಟ್ಟರು.
ಪ್ರೋ| ಹೆಗಡೆಯವರದ್ದು ಅನುಕರಣೀಯ, ಅನುಸರಣೀಯ ವ್ಯಕ್ತಿತ್ವ. ಕರ್ನಾಟಕ ಅಕಾಡೆಮಿಯಲ್ಲಿ ನಾನು ಸದಸ್ಯನಾಗಿದ್ದಾಗ ಅವರೊಂದಿಗಿನ ಒಡನಾಟ ನನಗೆ ಬಹಳಷ್ಟು ಕಲಿಸಿದೆ. ಇದೀಗ ಅಕಾಡೆಮಿಯು ಸೂರ್ಯನಿಲ್ಲದ ಬಾನಿನಂತಾಗಿದೆ . ಅಪ್ರತಿಮ ಕವಿ, ಉತ್ತಮ ಆಡಳಿತಗಾರ, ತತ್ವಶಾಸ್ತ್ರ ವಿಧ್ವಾಂಸ ಹೆಗಡೆಯವರು ನಮ್ಮಿಂದ ದೂರವಾಗಿದ್ದರೂ ನಾವಿರುವಷ್ಟು ಕಾಲ ಅವರ ತತ್ವ ಆದರ್ಶಗಳು ನಮ್ಮೊಂದಿಗಿರುತ್ತದೆಂದು ಯಕ್ಷಗಾನ ವಿಮರ್ಶಕ ರಾಧಾಕೃಷ್ಠ ಕಲ್ಚಾರ್ ಹೇಳಿದರು.
ಕನ್ನಡ,ಇಂಗ್ಲಿಷ್,ಸಂಸ್ಕೃತ ವಿಧ್ವಾಂಸರಾಗಿದ್ದು, 27 ಯಕ್ಷಗಾನ ಪ್ರಸಂಗಕರ್ತರಾಗಿದ್ದು ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿದ್ದು ಉತ್ತಮ ಸಲಹಾಕಾರರಾಗಿದ್ದರು. ಅವರ ಅಕಾಲ ಮರಣ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಶಿರಸಿಯ ಯಕ್ಷಶಾಲ್ಮಲಾದ ನಾಗರಾಜ ಜೋಷಿ ನುಡಿದರು.
ಅವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರು ದಿ.ಎಂ ಎ ಹೆಗಡೆ ಸಂಸ್ಮರಣಾ ಸಮಿತಿ ಸ್ವರ್ಣವಲ್ಲಿ ಮಠ ಶಿರಸಿ ಇವರೊಂದಿಗೆ ಸಂಯುಕ್ತವಾಗಿ ಹಮ್ಮಿಕೊಂಡ ಪ್ರೋ| ಎಂ ಎ ಹೆಗಡೆ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಖ್ಯಾತ ಉದ್ಯಮಿ ಗುಂಡ್ಮಿ ವೈಕುಂಠ ಹೇರ್ಳೆ ಉಪಸ್ಥಿತರಿದ್ದರು. ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು, ರಾಮಚಂದ್ರ ಐತಾಳ್ ಕಾರ್ಯಕ್ರಮ ನಿರ್ವಹಿಸಿದರು. ಸೀತಾರಾಮ ಸೋಮಯಾಜಿ ವಂದನಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮದ ನಂತರ ಪ್ರೋ| ಎಂ ಎ ಹೆಗಡೆ ರಚಿತ ಸೀತಾ ಪರಿತ್ಯಾಗ ಯಕ್ಷಗಾನ ತಾಳಮದ್ದಲೆ ಏರ್ಪಡಿಸಲಾಗಿತ್ತು.

