ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ವ್ಯವಹಾರದಲ್ಲಿ ದರ ಸಮರ ಉಂಟಾದಾಗ ಯಶಸ್ಸಿನ ಬದಲು ನಷ್ಟವೇ ಹೆಚ್ಚು. ಅದರ ಬದಲು ಸಂಘಟಿಕರಾಗಿ ವ್ಯವಹಾರ ನಡೆಸುವುದರ ಮೂಲಕ ತಮ್ಮ ವ್ಯವಹಾರದಲ್ಲಿ ಯಶಸ್ಸು ಸಾಧ್ಯ ಎಂದು ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಪೂಜಾರಿ ಬೇಳಂಜೆ ಹೇಳಿದರು.
ಅವರು ಹೆಬ್ರಿಯ ಇಕ್ಕಕೋಡ್ಲ್ ಫಾರ್ಮ್ ಹೌಸ್ನಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್(ರಿ.) ಇದರ ಉಡುಪಿ ಸಂಘದ ೭ನೇ ವರುಷದ ಸ್ನೇಹ ಕೂಟ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಈ ಸಂದರ್ಭ ಇತ್ತೀಚಿಗೆ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಅಕಾಲಿಕ ಮರಣ ಹೊಂದಿದ ಜನರಲ್ ಬಿಪಿನ್ ರಾವತ್ ಮತ್ತು ಅವರ ತಂಡಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಲಾವಿದ ಉಡುಪಿಯ ಉಷಾ ಆರ್ಟ್ಸ್ನ ಶ್ರೀನಿವಾಸ ಕೆ. ಸೇರಿಗಾರ್, ಪೈಂಟಿಂಗ್ ಕುಂದಾಪುರದ ಆರ್ಟಿಸ್ಟ್ನ ಜಗದೀಶ್ ಭಂಡಾರಿ, ಉಡುಪಿಯ ಮೂಸ ಆರ್ಟ್ಸ್ನ ಆನಂದ ಸೇರಿಗಾರ್, ವ್ಯತ್ತಿಯಲ್ಲಿ ೨೦ ವರ್ಷಗಳ ಸಾಧನೆಗೈದ ಸಂಘದ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಲ್ಪೆಯವರನ್ನು ಸನ್ಮಾನಿಸಲಾಯಿತು.
ಮುಂದಿನ ಎರಡು ವರುಷದ ಅವಧಿಗೆ ರಾಜೇಶ್ ಕುಮಾರ್ ಅಂಬಾಡಿಯವರನ್ನು ಅಧ್ಯಕ್ಷರಾಗಿ ಮತ್ತು ಇತರ ೧೩ ಸದಸ್ಯರನ್ನು ಕಮಿಟಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷ ದಾಮೋದರ, ಅಕ್ಬರ್ ಎಸ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮಧುಸೂಧನ್ರವರು ಸ್ವಾಗತಿಸಿದರು. ಕೋಶಾಧಿಕಾರಿ ಅನಿಲ್ ಶೆಟ್ಟಿ ವಂದಿಸಿದರು. ಅವಿನಾಶ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.
