ಬೆಂಗಳೂರು: ಎಂಇಎಸ್ ನಿಷೇಧಿಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಕರ್ನಾಟಕ ಬಂದ್ ಹಿಂಪಡೆಯುವಂತೆ ಸಿಎಂ ಕೋರಿಕೊಂಡರು. ಸಿಎಂ ಮನವಿಯ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಾಳಿನ ಕರ್ನಾಟಕ ಬಂದ್ ಮುಂದೂಡಲಾಗುವುದು ಎಂದು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡು, ಹೊಸ ವರ್ಷಕ್ಕೆ ತೊಂದರೆಯಾಗಲಿದೆ, ಅದು ಸರಿಯಿಲ್ಲ ಎಂಬುದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ನನ್ನ ಜೀವನದಲ್ಲಿ ಇಂದು ಬಂದಂತ ಒತ್ತಡಗಳು, ಈ ಹಿಂದೆ ಎಂದಿಗೂ ಬಂದಿರಲಿಲ್ಲ. ಅನೇಕರು ನನ್ನ ಬಗ್ಗೆ ಟೀಕೆಗಳನ್ನು ಮಾಡಿದ್ರು. ಅವರದ್ದೇ ಆದಂತ ಮಾತುಗಳಲ್ಲಿ ಆಡಿದ್ರು. ಇವರು ಸಂಪೂರ್ಣವಾಗಿ ಬಂದ್ ಮಾಡೋದಕ್ಕೆ ಹೊರಟಿದ್ದಾರೆ. ಈ ಬಂದ್ ತೊಂದರೆಯಾಗುತ್ತೆ ಅಂತ ಹೇಳಿದ್ರು. ಚಲನಚಿತ್ರ ವಾಣಿಜ್ಯ ಮಂಡಳಿಯವರು ಧ್ವನಿಯೆತ್ತಿ ಬಂದ್ ಗೆ ಬೆಂಬಲವಿಲ್ಲ ಎಂಬುದಾಗಿ ಹೇಳಿದ್ರು. ಈ ಎಲ್ಲಾ ನಾನಾ ಕಾರಣದಿಂದಾಗಿ ನಾಳಿನ ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಕನ್ನಡಪರ ಸಂಘಟನೆಗಳಿಗೆ ಕರ್ನಾಟಕ ಬಂದ್ ವಾಪಾಸ್ ಪಡೆಯುವಂತೆ ಮನವಿ ಮಾಡಲಾಯಿತು. ಕನ್ನಡ ಉಳಿಸೋದಕ್ಕೆ ನಾವೆಲ್ಲಾ ಒಂದಾಗಿ ಹೋರಾಡೋಣ ಎಂದು ಹೇಳಿದ್ದೇನೆ. ಸರ್ಕಾರ ನಿಮ್ಮ ಜೊತೆಗೆ ಇದೆ ಎಂದು ಹೇಳಿದ್ದೇನೆ. ನಮ್ಮ ಮನವಿಗೆ ಪ್ರತಿಸ್ಪಂದಿಸಿದ, ನಾಳಿನ ಕರ್ನಾಟಕ ಬಂದ್ ವಾಪಾಸ್ ಪಡೆದಿದ್ದಾರೆ. ಅವರಿಗೆ ಧನ್ಯವಾದ ಎಂದರು.
ಎಂಇಎಸ್ ಪುಂಡಾಟಿಕೆ ಖಂಡಿಸಿ, ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ನಾಳೆ ಬಂದ್ ಗೆ ಕರೆ ನೀಡಿದವು.
ನಾಳಿನ ಕರ್ನಾಟಕ ಬಂದ್ ವಾಪಾಸ್ ಪಡೆಯುವಂತೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದರು. ಅಲ್ಲದೇ ಈ ವಿಚಾರವಾಗಿ ಚರ್ಚಿಸಲು ಭೇಟಿ ಮಾಡುವಂತೆಯೂ ತಿಳಿಸಿದ್ದರು.
ವಾಟಾಳ್ ನಾಗರಾಜ್ ಅವರು ಜನವರಿ 20ರ ಒಳಗಾಗಿ ಎಂಇಎಸ್ ನಿಷೇಧಿಸುವಂತ ನಿರ್ಧಾರವನ್ನು ಸಿಎಂ ಪ್ರಕಟಿಸಬೇಕು. ಒಂದು ವೇಳೆ ಈ ನಿರ್ಧಾರ ತೆಗೆದುಕೊಳ್ಳದೇ ಇದ್ದರೇ ಜನವರಿ 22ರಂದು ಕರ್ನಾಟಕ ಬಂದ್ ನಡೆಸಲಾಗುತ್ತದೆ. ಅದಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕೆ.ಆರ್.ಕುಮಾರ್, ಮಂಜುನಾಥ್ ಬೆಂಬಲಿಸಿದರೆ ಮಾತ್ರ ಸಿಎಂ ಭೇಟಿಗೆ ಬರುವುದಾಗಿ ಶರತ್ತು ವಿಧಿಸಿದ್ದರು.

ಅದರಂತೆ ಸಿಎಂ ಎದುರು ಮಹತ್ವದ ವಿಚಾರಗಳನ್ನು ಚರ್ಚಿಸಿಲಾಗಿದೆ. ಎಂಇಎಸ್ ಸಂಘಟನೆ ನಿಷೇಧಿಸುವಂತೆಯೂ ಮನವಿ ಮಾಡಿದ್ದಾರೆ.