ವರದಿ : ಶ್ರೀದತ್ತ ಹೆಬ್ರಿ
ಮುದ್ರಾಡಿ : ಕೊರೋನಾ, ಒಮಿಕ್ರಾನ್ ಸೇರಿದಂತೆ ವಿವಿಧ ಸಂಕಷ್ಟಗಳು ನಮ್ಮನ್ನು ನಿತ್ಯವೂ ಎಂಬಂತೆ ಕಾಡುತ್ತಿದೆ, ನಮ್ಮ ಗ್ರಾಮದ ಮುದ್ರಾಡಿ ಕಬ್ಬಿನಾಲೆಯ ಎಲ್ಲರೂ ಆರೋಗ್ಯದಿಂದ ಇರಬೇಕು ಎಂಬುದು ನಮ್ಮ ಆಸೆ,ಅದಕ್ಕಾಗಿ ಒಂದು ಬಗೆಯ ಕಷ್ಟದ ಈ ದಿನದಲ್ಲಿ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದೇವೆ. ನಾವು ಜನರ ಸೇವೆಗಾಗಿ ಸದಾ ಇದ್ದೇವೆ, ನನ್ನ ಮಗಳು ವೈದ್ಯಕೀಯ ಪದವಿ ಮುಗಿಸಿ ಸೇವೆಗೆ ಸೇರುವ ಈ ಸಂದರ್ಭದಲ್ಲೇ ನನಗೆ ಆರೋಗ್ಯ ಶಿಬಿರದ ಮೂಲಕ ಜನಸೇವೆ ಮಾಡುವ ಅವಕಾಶ ದೊರೆತಿರುವುದಕ್ಕೆ ಮನಸ್ಸಿಗೆ ಖುಷಿಯಾಗಿದೆ ಎಂದು ಮುದ್ರಾಡಿ ಶ್ರೀಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜನನಾಯಕ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಮುದ್ರಾಡಿ ಶ್ರೀಗುರುರಕ್ಷಾ ಸೌಹಾರ್ದ ಸಹಕಾರಿಯ ಆವರಣದಲ್ಲಿ ಮುದ್ರಾಡಿ ಶ್ರೀಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುದ್ರಾಡಿ ಗ್ರಾಮ ಪಂಚಾಯಿತಿ, ಮುದ್ರಾಡಿ ಶ್ರೀಗುರುರಕ್ಷಾ ಸೌಹಾರ್ದ ಸಹಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನ ತಜ್ಞ ವೈದ್ಯರಿಂದ ಶನಿವಾರ ನಡೆದ ಬೃಹತ್ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ. ಸಂತೋಷ್ ಕುಮಾರ್ ಮಾತನಾಡಿ, ಎಲ್ಲರೂ ಕೋವಿಡ್ ಮಹಾಮಾರಿಯ ಈ ಕಾಲದಲ್ಲಿ ಆರೋಗ್ಯದ ಬಗೆಗೆ ಅತೀ ಹೆಚ್ಚಿನ ಜಾಗೃತಿ ವಹಿಸಿ ಸರ್ಕಾರದ ಕೋವಿಡ್ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದರು. ಬೃಹತ್ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಡಾ. ವಿದ್ಯಾ ಬಲ್ಲಾಳ್ ಉದ್ಘಾಟಿಸಿ ಶುಭ ಹಾರೈಸಿದರು.
ಜನರ ವಿಶೇಷ ಆರೋಗ್ಯ ಸೇವೆಗಾಗಿ ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ. ಸಂತೋಷ್ ಕುಮಾರ್, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಡಾ. ವಿದ್ಯಾ ಬಲ್ಲಾಳ್, ಆರೋಗ್ಯ ಇಲಾಖೆಯ ಸಿಬ್ಬಂದಿ, ತಜ್ಞ ವೈದ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಉಚಿತ ಔಷಧಿ ಮತ್ತು ಎಲ್ಲರಿಗೂ ಮಾಸ್ಕ್ ವಿತರಿಸಲಾಯಿತು. ೨೨೫ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಕಮಲಾ ಚಂದು ಪೂಜಾರಿ ಮುದ್ರಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುದ್ರಾಡಿ ವಲಯ ಮೇಲ್ವೀಚಾರಕ ಮನೋಜ್ ಹೆಗ್ಡೆ, ವಲಯಾಧ್ಯಕ್ಷ ರತ್ನಾಕರ ಪೂಜಾರಿ, ಮುದ್ರಾಡಿಯ ಡಾ. ಪ್ರದೀಪ್ ಕುಮಾರ್ ಶೆಟ್ಟಿ, ತಜ್ಞ ವೈದ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಧರ್ಮಸ್ಥಳ ಯೋಜನೆಯ ಪದಾಧಿಕಾರಿಗಳು, ಒಕ್ಕೂಟದ ಪ್ರಮುಖರು,ಸೇವಾ ಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

