ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಈ ಬಾರಿ ಮಳೆಯ ಕಾರಣ ಬತ್ತದ ಕೊಯ್ಲಿನ ಸಂದರ್ಭ ಹುಲ್ಲು ಹಾಳಾಗಿದ್ದು, ಗೋವುಗಳಿಗೆ ಹುಲ್ಲಿನ ಕೊರತೆ ಇದ್ದು ಅದನ್ನು ಅರಿತು ರೋಟರಿ ಸಾಯಿಬರಕಟ್ಟೆಯಿಂದ ನೀಲಾವರ ಗೋಶಾಲೆಗೆ 1 ಲೋಡ್ ಒಣ ಹುಲ್ಲು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭ ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ ಮಾತನಾಡಿ, ಗೋವುಗಳು ನಮಗೆ ಮಾತೆ ಸಮಾನವಾಗಿದ್ದು ಅದರ ಸೇವೆ ಮಾಡುವುದು ಒಂದು ಪುಣ್ಯದ ಕೆಲಸವಾಗಿದೆ. ಸಾಯಿಬರ ಕಟ್ಟೆ ರೋಟರಿಯ ಈ ಸಂದರ್ಭೋಚಿತ ಒಣ ಹುಲ್ಲಿನ ಕೊಡುಗೆ ಶ್ಲಾಘನೀಯವಾಗಿದೆ ಎಂದರು.

ಗೋವಿಗಾಗಿ ಮೇವು ಸಂಘಟನೆಯ ಸಂಚಾಲಕ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡಿ, ಗೋವಿಗಾಗಿ ಮೇವು ಸಂಘಟನೆ ಶುರುಮಾಡಿದ ಮೇಲೆ ಹಲವಾರು ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದು, ಕಳೆದ ಬಾರಿ ಸುಮಾರು 700 ಟೆಂಪೋಗೂ ಅಧಿಕ ಹಸಿ ಹುಲ್ಲು ಗೋಶಾಲೆಗೆ ಬಂದಿದ್ದು, ಈ ಭಾರಿಯೂ 300ಕ್ಕೂ ಮಿಕ್ಕಿ ಲೋಡ್ ಹಸಿ ಹುಲ್ಲು ಕೊಡುಗೆಯಾಗಿ ಬಂದಿದೆ. ಅಂತಾರಾಷ್ಟ್ರೀಯ ಸಂಸ್ಥೆ ರೋಟರಿ ಕೂಡ ಕೈ ಜೋಡಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ನುಡಿದರು.

ಗೋಶಾಲೆ ಮೇಲ್ವಿಚಾರಕ ನರಸಿಂಹ ಭಟ್ ಮಾತನಾಡಿ, ಸಾಯಿಬರಕಟ್ಟೆ ರೋಟರಿಯ ಒಣ ಹುಲ್ಲಿನ ಕೊಡುಗೆ ಬಗ್ಗೆ ಮಾತನಾಡಿ ಇದೆ ಮೊದಲು ರೋಟರಿ ಸಂಸ್ಥೆಯೊಂದು ಹುಲ್ಲಿನ ಕೊಡುಗೆ ನೀಡಿದ್ದು ಇಲ್ಲಿ 1000ಕ್ಕೂ ಅಧಿಕ ಗೋವುಗಳಿದ್ದು, ಇನ್ನೂ ಅನೇಕ ರೋಟರಿ ಸಂಸ್ಥೆಗಳಿಂದ ಹೀಗೆ ಕೊಡುಗೆ ಬಂದರೆ ಬಹಳ ಉಪಯುಕ್ತವಾಗಿದ್ದು, ರೋಟರಿ ಸಂಸ್ತೆಗಳು ಕೊಡುಗೆ ನೀಡುವಂತಾಗಲಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಾಯಿಬರಕಟ್ಟೆ ರೋಟರಿ ಅಧ್ಯಕ್ಷ ಯು.ಪ್ರಸಾದ್ ಭಟ್, ವಲಯ ಸೇನಾನಿ ವಿಜಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯದಾಸ್, ಮಂದಾರ್ತಿ ರೈತ ಮೋರ್ಚಾದ ಅಧ್ಯಕ್ಷ ರಾಘವೇಂದ್ರ ಮೆಂಡನ್, ರೋಟರಿ ಸದಸ್ಯರಾದ ಶಶಿಕಾಂತ್, ಕಿರಣ್, ನೀಲಕಂಠ ರಾವ್, ರಾಮ್ ಪ್ರಕಾಶ್ ಉಪಸ್ಥಿತರಿದ್ದರು


































