ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಡಿವೈಡರ್ ಗೆ ಡಿಕ್ಕಿಯಾಗಿ, ಬಳಿಕ ಎದುರಿಗೆ ಬರುತ್ತಿದ್ದಂತಹ ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾಚೇನಹಳ್ಳಿಯ ಬಳಿ ನಡೆದಿದೆ.
ಭದ್ರಾವತಿಯ ನ್ಯೂಟನ್ ನ ಷಣ್ಮುಗ ಹಾಗೂ ರಾಮಚಂದ್ರ ಮೃತಪಟ್ಟವರು.
ಭದ್ರಾವತಿಯಿಂದ ಕೆಲಸ ನಿಮಿತ್ತ ಕಾರಿನಲ್ಲಿ ಷಣ್ಮುಗ ಹಾಗೂ ರಾಮಚಂದ್ರ ತೆರಳುತ್ತಿದ್ದರು. ಶಿವಮೊಗ್ಗದ ಮಾಚೇನಹಳ್ಳಿಯ ಬಳಿ ಶಿವಮೊಗ್ಗ ಕಡೆಯಿಂದ ಸಾಗುತ್ತಿದ್ದಂತ ಟಿಪ್ಪರ್ ಲಾರಿ, ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ, ಬಳಿಕ ಎದುರು ರಸ್ತೆಯಲ್ಲಿ ಸಾಗುತ್ತಿದ್ದಂತ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ರಾಮಚಂದ್ರ ಹಾಗೂ ಷಣ್ಮುಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದಂತ ಷಣ್ಮುಗ ಹಾಗೂ ರಾಮಚಂದ್ರ ಅವರನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು.
ಈ ಬಗ್ಗೆ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

