ವರದಿ : ದಿನೇಶ್ ರಾಯಪ್ಪನಮಠ
ಕೋಟ : ಕೋಟದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ, ರಂಗನಟ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಟದ ಪಟೇಲರ ಮನೆಯಂಗಣದಲ್ಲಿ ಫೆಬ್ರವರಿ 2 ರ ಬುಧವಾರ ಸಂಜೆ 3.30 ಕ್ಕೆ ನಡೆಯಲಿದೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರಿನ ಡಾ. ಪಿ ಸದಾನಂದ ಮಯ್ಯ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದ್ಯಮಿ ಆನಂದ ಸಿ ಕುಂದರ್, ಕೆನರಾ ಬ್ಯಾಂಕ್ ನ ಮಹಾ ಪ್ರಬಂಧಕ ರಾಮ ನಾಯ್ಕ್ ಕೆ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮಹಾ ಪ್ರಬಂಧಕರಾದ ಪಿ. ಭಾಸ್ಕರ ಹಂದೆ, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಬಹುಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ ಮೊದಲಾದವರ ಸಮ್ಮುಖದಲ್ಲಿ ನಡುತಿಟ್ಟಿನ ಪ್ರಸಿದ್ಧ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ ಉಡುಪ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಾಲಿಗ್ರಾಮ ಮಕ್ಕಳ ಮೇಳದ ಪ್ರಾಕ್ತನ ಕಲಾವಿದ ಬೆಂಗಳೂರಿನ ಉದ್ಯಮಿ ರಾಮದೇವ ಉರಾಳ ಉಡುಪ ಸಂಸ್ಮರಣೆ ಮಾಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಸಹಕಾರದಲ್ಲಿ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಮತ್ತು ಬಳಗದವರಿಂದ ಸಂಗೀತ ವೈಭವ ಹಾಗೂ ಸಂಜೆ 6.30 ರಿಂದ ಗುರು ಪ್ರಸಾದಿತ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಕಲಾವಿದ, ವಿದ್ವಾಂಸ ಸುಜಯೀಂದ್ರ ಹಂದೆಯವರ ಚೊಚ್ಚಲ ಪ್ರಸಂಗವಾದ “ರುರು ಪ್ರಮದ್ವರಾ” ಮತ್ತು ನಿತ್ಯಾನಂದ ಅವದೂತ ವಿರಚಿತ “ಕನಕಾಂಗಿ ಕಲ್ಯಾಣ” ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
