ಬೆಂಗಳೂರು : ಹಿಜಾಬ್ ವಿವಾದ ತಾರಕಕ್ಕೇರಿದ್ದು, ಇಂದು ಮತ್ತೆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಹಿರಿಯ ನ್ಯಾ. ಕೃಷ್ಣ ದೀಕ್ಷಿತ್ ವಿಚಾರಣೆ ನಡೆಸಿ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದ್ದಾರೆ. ಮುಂದಿನ ನಿರ್ಧಾರ ಸಿಜೆ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ಆರಂಭದಲ್ಲಿ ವಿಸ್ತೃತ ಪೀಠಕ್ಕೆ ಪ್ರಕರಣ ನೀಡುವ ಬಗ್ಗೆ ನ್ಯಾಯಾಧೀಶರು ಹೇಳಿದಾಗ, ಅರ್ಜಿದಾರರ ಪರ ವಕೀಲರು ಒಪ್ಪಿಕೊಳ್ಳದೆ, ಇಂದೇ ತೀರ್ಪು ನೀಡಲು ಸೂಚಿಸಿದರು. ವಿಸ್ತೃತ ಪೀಠದಲ್ಲಿ ತಾನೂ ಸದಸ್ಯನಾಗಿರುತ್ತೇನೆ. ಆಗ ಆಕ್ಷೇಪವಿದೆಯೇ ಎಂದು ಜಡ್ಜ್ ಕೇಳಿದ್ದಾರೆ.
ಕೇರಳ, ಮದ್ರಾಸ್ ಪ್ರಕರಣದಲ್ಲಿ ಒಬ್ಬ ನ್ಯಾಯಾಧೀಶರಷ್ಟೇ ತೀರ್ಪು ನೀಡಿದ್ದರು. ವಿಚಾರಣೆ ನೀವೇ ಮುಂದುವರೆಸಿ, ನಾವು ಮಂಡಿಸಲು ಸಿದ್ಧರಿದ್ದೇವೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

2 ತಿಂಗಳ ಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡರೆ ಆಕಾಶ ಕಳಚಿ ಬೀಳಲ್ಲ. ಇಂದಿನ ತುರ್ತು ಅವಶ್ಯಕತೆ ಶಾಂತಿ. ತರಗತಿಗಳು ಆರಂಭವಾಗಲಿ. ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಾ ಎಂಬ ವಾದ ಬೇಡ. ಆಡಳಿತ ಅಧಿಕಾರ ಎಂಬುದು ನಿರ್ಧಾರವಾಗಬೇಕು ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ದೂರುದಾರರ ಪರವಾಗಿ ದೇವದತ್ ಕಾಮತ್, ಕಾಳೀಶ್ವರಂ ರಾಜ್, ವಾದ ಮಂಡನೆ ಮಾಡಿದರೆ, ಸರ್ಕಾರದ ಪರವಾಗಿ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದ್ದಾರೆ. ಆಡಳಿತ ಮಂಡಳಿ ಪರ ಸಜನ್ ಪೂವಯ್ಯ ವಾದ ಮಂಡಿಸಿದರು.
ಕೋರ್ಟ್ ಮೇಲೆ ಸಂಪೂರ್ಣ ನಂಬಿಕೆಯಿದೆ. ಇದು ಕಾನೂನು ಸುವ್ಯವಸ್ಥೆ ಮೇಲೆ ಪರಿಣಾನ ಬೀರಲಿದೆ. ಅಂತಿಮವಾಗಿ ಕೋರ್ಟ್ ತೀರ್ಮಾನಕ್ಕೆ ಬಿಡುತ್ತೇವೆ ಎಂದು ಎಜೆ ತಿಳಿಸಿದ್ದಾರೆ.
ವಿದ್ಯಾರ್ಥಿನಿಯರ ದೂರಿನಲ್ಲೇ ತಪ್ಪಿದೆ. ವಿದ್ಯಾರ್ಥಿನಿಯರು ಸರ್ಕಾರದ ಆದೇಶವನ್ನೇ ಪ್ರಶ್ನಿಸಿದ್ದಾರೆ. ಪ್ರತಿ ವಿದ್ಯಾಸಂಸ್ಥೆಗೂ ಸ್ವಾಯತ್ತತೆ ನೀಡಲಾಗಿದೆ. ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ, ಈ ಪ್ರಕರಣವೇ ಕಪೋಲಕಲ್ಪಿತ. ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗ ಅಲ್ಲ ಎಂಬ ಅನೇಕ ತೀರ್ಪುಗಳಿವೆ. ಕಾಲೇಜಿನ ಸಮವಸ್ತ್ರ ನೀತಿ ಪಾಲಿಸಿ, ವಿದ್ಯಾರ್ಥಿನಿಯರು ಶಾಲೆಗೆ ಬರಲಿ. ಮಧ್ಯಂತರ ಆದೇಶ ಬೇಡ ಎಂದು ಎಜೆ ವಾದ ಮಂಡಿಸಿದರು.

ನಾವು ಯಾವ ಬಟ್ಟೆ ಹಾಕಬೇಕು ಎಂಬುದನ್ನು ಕಾಲೇಜು ನಿರ್ಧರಿಸಬಾರದು. ವಿದ್ಯಾರ್ಥಿಗಳು ತಮ್ಮಿಷ್ಟದ ಬಟ್ಟೆ ಹಾಕಲು ಅವಕಾಶ ಕೊಡಬೇಕು ಎಂದು ದೂರುದಾರರ ಪರ ವಕೀಲ ಹೇಳಿದರು.
ಆಡಳಿತ ಮಂಡಳಿ ಪರ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ಶಾಲೆ ಆಡಳಿತ ಮಂಡಳಿ ಪ್ರತಿ ವರ್ಷ ಸಭೆ ನಡೆಸುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಧಾರ. ಸರ್ಕಾರ ಇದರಲ್ಲಿ ಏನೂ ಮಾಡಿಲ್ಲ. ಯಾವುದೇ ಮಧ್ಯಂತರ ಆದೇಶ ನೀಡಬೇಡಿ ಎಂದರು.
ಇದು ಸಮವಸ್ತ್ರ ಪ್ರಶ್ನೆ ಅಲ್ಲ. ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸುತ್ತಿದ್ದಾರೆ. ಪೂವಯ್ಯ ಕಕ್ಷಿದಾರರು ವಿದ್ಯಾರ್ಥಿನಿಯರನ್ನು ಹೊರ ಹಾಕಿದ್ದಾರೆ ಎಂದು ದೂರುದಾರರ ಪರ ವಕೀಲರು ಹೇಳಿದರು.
ವಾದ – ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಭಾಗೀಯ ನ್ಯಾಯಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. ಮಧ್ಯಂತರ ಆದೇಶವನ್ನು ವಿಭಾಗೀಯ ಪೀಠವೇ ನೀಡಲಿ ಎಂದಿದ್ದಾರೆ.
