ಉತ್ತರ ಕನ್ನಡ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪರಿಸರ ಹಾಡುಗಾರ ಮಾದೇವ ವೇಳಿಪ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದವರಾಗಿದ್ದಂತ ಮಾದೇವ ವೇಳಿಪ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಮಾದೇವ ವೇಳಿಪ ಅವರು ಜೀವ ಪರಿಸರ ಮತ್ತು ಕಾಲ ಮಾನಕ್ಕೆ ತಕ್ಕಂತೆ ಜಾನಪದ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ಹೀಗೆ ಸುಮಾರು ಸಾವಿರಾರು ಪರಿಸರ ಹಾಡುಗಳನ್ನು ಹಾಡಿದಂತ ಕೀರ್ತಿ ಮಾದೇವ ಅವರಿಗೆ ಸಲ್ಲುತ್ತದೆ. ಜೊತೆಗೆ ನಾಟಿ ವೈದ್ಯರು ಸಹ. ಅತೀ ಹಿಂದುಳಿದ ಕುಣಜಿ ಬುಡಕಟ್ಟು ಸಮುದಾಯದ ಇವರು ಹುಟ್ಟಿದಾಗಿನಿಂದ ಕಾಡಿನೊಂದಿಗೆ ಬೆರೆತು ಅಲ್ಲಿನ ಪ್ರತಿ ಸಸ್ಯಗಳ ಬಗ್ಗೆ ಮಾಹಿತಿ ಯನ್ನು ತನ್ನ ಮಸ್ತಕದಲ್ಲಿ ಅಚ್ಚಾಗಿಸಿಕೊಂಡವರು. ಹಸಿರಿನೊಂದಿಗೆ ಜೀವನ ಕಟ್ಟಿಕೊಂಡ ಇವರು ಇಲ್ಲಿನ ಪರಿಸರ ಉಳಿಸಲು, ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಹಾಡುಗಳನ್ನು ಕಟ್ಟಿ ಪರಿಸರದ ಜೊತೆ ಶಿಕ್ಷಣದ ಜಾಗೃತಿ ಮೂಡಿಸುತ್ತಿದ್ದರು.

ಇವರ ಪರಿಸರ ಕಾಳಜಿ ತಿಳಿದು ನಟ ದಿ.ಪುನೀತ್ ರಾಜ್ ಕುಮಾರ್ ಖುದ್ದು ಭೇಟಿಯಾಗಿದ್ದರು.
ಇವರ ಸಾಧನೆಯನ್ನು ಗುರುತಿಸಿದ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಜೊತೆಗೆ ಅವರಿಗೆ ಜಾನಪದ ಪ್ರಶಸ್ತಿಯೂ ಸಂದಿದೆ.

