ಬೆಂಗಳೂರು : ಡ್ರೆಸ್ ವಿವಾದದಿಂದ ಎರಡೂ ಕಡೆ ಬಿಸಿಯ ವಾತಾವರಣ ಸೃಷ್ಟಿಯಾಗಿತ್ತು. ಹೊರಗಿನ ಪ್ರಚೋದನೆಯಿಂದ ವಿವಾದ ಹೈಕೋರ್ಟ್ ನಲ್ಲಿದೆ. ಶಾಂತಿಯನ್ನು ಕಾಪಾಡುವಂತೆ ತಿಳಿಸುತ್ತಾ ಬಂದಿದ್ದು, ವಿದ್ಯಾರ್ಥಿಗಳು ಸಂಯಮದಿಂದ ವರ್ತಿಸಿದ್ದಾರೆ. ಧನ್ಯವಾದ ತಿಳಿಸುತ್ತೇನೆ
ಶಾಲಾ ಕಾಲೇಜು ಆವರಣದಲ್ಲಿ ಶಾಂತಿಯಿಂದ ಇರಬೇಕು. ಬೇಧ ಭಾವವಿಲ್ಲದೆ ಇರಬೇಕು. ಕಾನೂನನ್ನು ಗೌರವಿಸಬೇಕು. ಸೋಮವಾರ 10 ನೇ ತರಗತಿ ವರೆಗೆ ಶಾಲೆ ಆರಂಭ. ಬಳಿಕ ಹಂತವಾಗಿ ಮುಂದಿನ ತರಗತಿಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ನಾಳೆ ಡಿಸಿ, ಡಿಡಿಪಿಐಗಳ ಜೊತೆ ಸಭೆ ನಡೆಸಲಿದ್ದೇವೆ. ಶಾಂತಿ ಸುವ್ಯವಸ್ಥೆ ಕುರಿತು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿಜಾಬ್ – ಕೇಸರಿ ಶಾಲು ಸಂಘರ್ಷ ಹೈಕೋರ್ಟ್ ನಲ್ಲಿದೆ. ಇಂದಿನ ವಿಚಾರಣೆಯಲ್ಲಿ ಮುಂದಿನ ಆದೇಶದ ವರೆಗೂ ಧಾರ್ಮಿಕ ಉಡುಗೆ ತೊಡುವಂತಿಲ್ಲ ಎಂದು ಸೂಚಿಸಲಾಗಿದ್ದು, ಶಾಲೆ – ಕಾಲೇಜನ್ನು ತೆರೆಯಲು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದ ತುರ್ತು ಸಭೆ ನಡೆದಿದ್ದು, ಸೋಮವಾರದಿಂದ ಹೈಸ್ಕೂಲ್ ಆರಂಭಿಸಲು ನಿರ್ಧರಿಸಲಾಗಿದೆ.

