ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ: ಇತಿಹಾಸ ಪ್ರಸಿದ್ಧ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ. ಅವರನ್ನು ಚೆಂಡೆ ವಾಧ್ಯ ಘೋಷದಲ್ಲಿ ರಾಜ ಮರ್ಯಾದೆಯಲ್ಲಿ ದೇವಸ್ಥಾನಕ್ಕೆ ಕರೆತರಲಾಯಿತು.
ಪುರಾತನ ಕಾಲದಿಂದಲೂ ಹೆಬ್ರಿಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರನ್ನು ದೇವಸ್ಥಾನದ ಪ್ರಮುಖರು ಚೆಂಡೆ ವಾದ್ಯ ಘೋಷದ ಸಮೇತ ಠಾಣೆಗೆ ತೆರಳಿ ಆಹ್ವಾನಿಸಿ ಜಾತ್ರಾ ಮಹೋತ್ಸವಕ್ಕೆ ಕರೆತರುವ ಸಂಪ್ರದಾಯ ನಡೆದುಕೊಂಡು ಬರುತ್ತಿತ್ತು. ಈಗ ಹೆಬ್ರಿಯ ನೂತನ ತಾಲ್ಲೂಕು ಆಗಿದ್ದು, ಈ ಸಲ ತಾಲ್ಲೂಕು ದಂಡಾಧಿಕಾರಿಯಾಗಿರುವ ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ ಅವರನ್ನು ರಾಜ ಮರ್ಯಾದೆಯಲ್ಲಿ ವಿಶೇಷ ಆಹ್ವಾನ ನೀಡಿ ದೇವಸ್ಥಾನಕ್ಕೆ ಕರೆತರಲಾಯಿತು.


ತಾಲ್ಲೂಕು ಆಗಿ ೪ ವರ್ಷವಾಗಿದ್ದರೂ ಕೋವಿಡ್ ಹಿನ್ನಲೆಯಲ್ಲಿ ಸಂಪ್ರದಾಯ ಪಾಲಿಸಿರಲಿಲ್ಲ. ಮೊದಲು ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಆಹ್ವಾನ ನೀಡಿದ ಬಳಿಕ ತಹಶೀಲ್ದಾರ್ ಹೆಬ್ರಿ ಠಾಣೆ ವರೆಗೆ ನಡೆದುಕೊಂಡು ಸಾಗಿ ಬಂದರು. ಕಂದಾಯ ನಿರೀಕ್ಷಕ ಹಿತೇಶ್ ಯುಬಿ ಸಹಿತ ತಾಲ್ಲೂಕು ಕಚೇರಿಯ ಸಿಬ್ಬಂದ್ಧಿ ಜತೆಯಾದರು. ಠಾಣೆಯ ಎದುರು ಬಂದಾಗ ಸಬ್ ಇನ್ ಫೆಕ್ಟರ್ ಮಹೇಶ ಟಿಎಂ ಅವರಿಗೆ ಆಹ್ವಾನ ನೀಡಿದ್ದು ತಂಡದೊಂದಿಗೆ ಮೆರವಣಿಗೆಗೆ ಸೇರಿಕೊಂಡರು. ದೇವಸ್ಥಾನದ ತಂತ್ರಿಗಳಾದ ಪ್ರೇಮಚಂದ್ರ ಐತಾಳ್ ಉಪಸ್ಥಿತಿಯಲ್ಲಿ ಅರ್ಚಕ ಎಚ್. ನಾಗರಾಜ್ ಜೋಯಿಸ್ ಪೂಜೆ ಸಲ್ಲಿಸಿ ಪ್ರಸಾದ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷರಾದ ಎಚ್. ತಾರಾನಾಥ ಬಲ್ಲಾಳ್ ಮತ್ತು ಧಾರ್ಮಿಕ ಮುಂದಾಳು ಎಚ್. ಭಾಸ್ಕರ ಜೋಯಿಸ್ ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ ಮತ್ತು ಸಬ್ ಇನ್ ಫೆಕ್ಟರ್ ಮಹೇಶ ಟಿಎಂ ಅವರನ್ನು ಗೌರವಿಸಿದರು. ದೇವಸ್ಥಾನದ ಲೆಕ್ಕ ಪರಿಶೋಧಕ ಸುಬ್ರಹ್ಮಣ್ಯ ಓಕುಡ, ಸಮಾಜಸೇವಕರಾದ ಬೈಕಾಡಿ ಮಂಜುನಾಥ ರಾವ್ ಶಿವಪುರ, ಹೆಬ್ರಿ ಶಂಕರ ಶೇರಿಗಾರ್ ಸಹಿತ ಗಣ್ಯರು ಮೆರವಣಿಗೆಗೆ ಸಾಕ್ಷಿಯಾದರು.
ಹೆಬ್ರಿಯ ಇತಿಹಾಸ ಪ್ರಸಿದ್ಧ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಗೆ ನಮಗೆ ವಿಶೇಷ ಮರ್ಯಾದೆ ನೀಡಿ ದೇವಸ್ಥಾನಕ್ಕೆ ಆಹ್ವಾನಿಸಿ ನೀಡಿದ ಗೌರವ. ನಮ್ಮ ಜೀವಮಾನದ ಅಪೂರ್ವ ಕ್ಷಣ. ನಾಡಿನ ಸಂಸ್ಕೃತಿ ಸಂಪ್ರದಾಯಕ್ಕೆ ಶರಣು. ಅನಂತ ಪದ್ಮನಾಭ ಸ್ವಾಮೀಯ ಮೂಲಕ ನಾಡಿಗೆ ಒಳಿತಾಗಲಿ.ಪುರಂದರ್ ಕೆ., ಹೆಬ್ರಿ ತಹಶೀಲ್ದಾರ್