ಬೆಂಗಳೂರು : ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಹಿಜಾಬ್ ಕೇಸರಿ ಶಾಲು ಪ್ರಕರಣದ ವಿಚಾರಣೆ ಇಂದು ಮತ್ತೆ ಹೈಕೋರ್ಟ್ ತ್ರೀ ಸದಸ್ಯ ಪೀಠದಲ್ಲಿ ನಡೆದಿದ್ದು, ನಾಳೆ ಮಧ್ಯಾಹ್ನ 2.30 ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ನ್ಯಾ.ಕೃಷ್ಣಾ ಎಸ್.ದೀಕ್ಷಿತ್, ಸಿಜೆ ರಿತುರಾಜ್ ಅವಸ್ತಿ, ನ್ಯಾ.ಖಾಜಿ ಜೈಬಿನ್ನೀಸಾ ಮೊಹಿಯುದ್ದೀನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಿಂದ 6 ರಿಟ್ ಅರ್ಜಿ, ಕೆಲ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಯಿತು.
ಇದೇ ವೇಳೆ ಪಂಚರಾಜ್ಯ ಚುನಾವಣೆವರೆಗೂ ವಿಚಾರಣೆ ಬೇಡ ಎಂದು ಉಡುಪಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆ ಫೆ.28 ರ ವರೆಗೆ ವಿಚಾರಣೆ ಬೇಡ ಎಂದು ಅರ್ಜಿ ಸಲ್ಲಿಸಲಾಗಿತ್ತು. ಕೇವಲ ವಕೀಲರಷ್ಟೇ ಅರ್ಜಿಗೆ ಸಹಿ ಹಾಕಲಾಗಿತ್ತು. ಹೀಗಾಗಿ ಅರ್ಜಿ ವಜಾಗೊಂಡಿದೆ.

ಈ ವೇಳೆ ಒಬ್ಬಳು ವಿದ್ಯಾರ್ಥಿನಿ ಎರಡು ಅರ್ಜಿ ಸಲ್ಲಿಸಿದ್ದು, ಒಬ್ಬರಿಗೆ ಒಂದೇ ಅರ್ಜಿ ಹಾಗೂ ಒಬ್ಬ ವಕೀಲರಷ್ಟೇ ವಾದ ಮಂಡಿಸಬೇಕು ಎಂದು ಸಿಜೆ ಆದೇಶಿಸಿದರು.
ಮತ್ತೊಂದು ಮಧ್ಯಂತರ ಆದೇಶಕ್ಕೆ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಬೇಡಿಕೆ ಇಟ್ಟರು. ಸುದೀರ್ಘ ಅವಧಿಯ ವಾದ ಮಂಡಿಸಿದ್ದ ಕಾಮತ್, ಅಂತಿಮವಾಗಿ, ಈಗಾಗಲೇ ನೀಡಿರುವ ಮಧ್ಯಂತರ ಆದೇಶ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತಿದೆ. ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು ಹೇಳಿ ಮುಕ್ತಾಯಗೊಳಿಸಿದರು.
ಮತ್ತೊಬ್ಬ ಅರ್ಜಿದಾರರ ಪರ ರವಿ ವರ್ಮ ಕುಮಾರ್ ವಾದ ಮಂಡಿಸಿದರು.
ಸುದೀರ್ಘ ವಿಚಾರಣೆಯ ಬಳಿಕ ನಾಳೆಗೆ ವಿಚಾರಣೆ ಮುಂದೂಡಲಾಗಿದೆ. ನಾಳೆ ಮಧ್ಯಾಹ್ನ 2.30 ಕ್ಕೆ ವಿಚಾರಣೆ ನಡೆಯಲಿದೆ.

