ವರದಿ : ದಿನೇಶ್ ರಾಯಪ್ಪನಮಠ
ಕೋಟ: ಹಬ್ಬ ಹರಿದಿನಗಳು ಸಾಂಸ್ಕೃತಿಕ ಚಿಂತನೆಗೆ ಪೂರಕ ವಾತಾವರಣ ಕಲ್ಪಿಸುತ್ತದೆ ಆ ಮೂಲಕ ಸಾಕಷ್ಟು ಪ್ರತಿಭೆಗಳು ಹೊರಹೊಮ್ಮಲು ಸಹಕಾರಿ ಎಂದು ಕೋಟದ ಸಾಂಸ್ಕೃತಿಕ ಚಿಂತಕ ಚಂದ್ರಯ್ಯ ಆಚಾರ್ಯ ಹೇಳಿದರು.
ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಐದು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ ಕಲಾವಿದರಿಗೆ ಸ್ಪೂರ್ತಿದಾಯಕವಾಗಿರುವ ಧಾರ್ಮಿಕ ಕ್ಷೇತ್ರಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ ಈ ದಿಸೆಯಲ್ಲಿ ಪುರಾಣ ಹಿನ್ನಲ್ಲೆಯುಳ್ಳ ಕೋಟದ ಹಿರೇಮಹಾಲಿಂಗೇಶ್ವರ ಕ್ಷೇತ್ರ ಭಕ್ತ ಮಹಾಶಯರ ಕೇಂದ್ರ ಸ್ಥಾನವಾಗಿ ರೂಪುಗೊಂಡಿದೆ.ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಶ್ರೀ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಶಂಕರನಾರಾಯಣ ಅಡಿಗ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಹಿರೇಮಹಾಲಿಂಗೇಶ್ವರ ಮಿತ್ರ ವೃಂದದ ಕಾರ್ಯದರ್ಶಿ ಜಿ.ಎಸ್ ಆನಂದ್ ದೇವಾಡಿಗ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯಕ್ಷಗುರು ಕೃಷ್ಣಮೂರ್ತಿ ಉರಾಳ,ಕೋಟ ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ದ.ಕ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ನಿರ್ದೇಶಕ ದೇವಪ್ಪ ಕಾಂಚನ್,ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಸದಸ್ಯ ಭೋಜ ಪೂಜಾರಿ ಗಿಳಿಯಾರು,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚವರ್ಣ ಯುವಕ ಮಂಡಲದ ಸ್ಥಾಪಕ ಸದಸ್ಯ ರಾಘವೇಂದ್ರ ಗಾಣಿಗ ಸ್ವಾಗತಿಸಿ ನಿರೂಪಿಸಿದರು.ನಂತರ ಲಾವಣ್ಯ ಬೈಂದೂರು ರಂಗತಂಡದಿಂದ ನಾಟಕ ಪ್ರದರ್ಶನಗೊಂಡಿತು.

