ಬೆಂಗಳೂರು : ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಹಿಜಾಬ್ ಕೇಸರಿ ಶಾಲು ಪ್ರಕರಣದ ವಿಚಾರಣೆ ಇಂದು ಮತ್ತೆ ಹೈಕೋರ್ಟ್ ತ್ರೀ ಸದಸ್ಯ ಪೀಠದಲ್ಲಿ ನಡೆದಿದ್ದು, ಸೋಮವಾರ ಮಧ್ಯಾಹ್ನ 2.30 ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ನ್ಯಾ.ಕೃಷ್ಣಾ ಎಸ್.ದೀಕ್ಷಿತ್, ಸಿಜೆ ರಿತುರಾಜ್ ಅವಸ್ತಿ, ನ್ಯಾ.ಖಾಜಿ ಜೈಬಿನ್ನೀಸಾ ಮೊಹಿಯುದ್ದೀನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಿಂದ ವಿಚಾರಣೆ ನಡೆಯಿತು.
ರಾಜ್ಯ ಸರ್ಕಾರದ ವಾದವನ್ನು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಮಂಡಿಸಿದರು.

ಫೆಬ್ರವರಿ 5ರಂದು ಸರ್ಕಾರ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸರ್ಕಾರದ ಆದೇಶವನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಸಮವಸ್ತ್ರ ನೀಡುತ್ತಿದೆ. ಸಮಾನತೆ, ಶಿಸ್ತಿಗೆ ಪೂರಕವಾಗಿ ಸಮವಸ್ತ್ರ ಧರಿಸಬೇಕು. ಸಮವಸ್ತ್ರವಿಲ್ಲದ ಕಾಲೇಜುಗಳಲ್ಲಿ ಗೌರವಯುತ ಸಮವಸ್ತ್ರ ಧರಿಸಬೇಕು ಎಂಬುದಾಗಿ ತಮ್ಮ ವಾದವನ್ನು ಮುಂದಿಟ್ಟರು.
ಸುದೀರ್ಘ ವಾದ ಆಲಿಸಿದ ಬಳಿಕ ಸೋಮವಾರಕ್ಕೆ ವಿಚಾರಣೆ ಮುಂದೂಡಲಾಗಿದೆ. ಸೋಮವಾರ ಮಧ್ಯಾಹ್ನ 2.30 ಕ್ಕೆ ವಿಚಾರಣೆ ನಡೆಯಲಿದೆ.

