ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು, ಬಂಡೀಮಠ, ಕೂರಾಡಿ ಮೂಲಕ ಅತೀ ಹತ್ತಿರದಲ್ಲಿ ಕೊಕ್ಕರ್ಣೆ ಸಂಪರ್ಕದ ಹನೆಹಳ್ಳಿ ಗ್ರಾಮ ಪಂಚಾಯತಿ ಬಳಿ ಇರುವ ದಂಡೆ ಇರದ ಕಿರು ಸೇತುವೆಗೆ ಬುಧವಾರ ಸಂಜೆ ಮಣ್ಣು ತುಂಬಿದ ಟೆಂಪೋವೊಂದು ಬಿದ್ದು, ಚಾಲಕ ಬಾರೀ ಅಪಾಯದಿಂದ ಪಾರಾಗಿದ್ದಾರೆ.
ಅತೀ ಅಪಾಯಕಾರಿ ತಿರುವಿನಲ್ಲಿರುವ ಈ ಕಿರು ಸೇತುವೆ 50 ವರ್ಷ ಹಿಂದಿನದ್ದಾಗಿದ್ದು, ಕುಸಿಯುವ ಬೀತಿಯಲ್ಲಿದೆ ಎಂದು ಕಳೆದ ವರ್ಷ ವಿಸ್ತೃತ ವರದಿ ಮಾಡಿ ಗಮನ ಸೆಳೆದ ಪರಿಣಾಮ ಸೇತುವೆ ಕಾಮಗಾರಿಗೆ ಸರಕಾರದಿಂದ ಹಣ ಬಿಡುಗಡೆಗೊಂಡಿತ್ತು.


ಕಳೆದ ವರ್ಷ ಮೇ ತಿಂಗಳಲ್ಲಿ ಸೇತುವೆ ಕಾಮಗಾರಿ ಮುಗಿಯ ಬೇಕಿತ್ತು . ಆದರೆ ಗುತ್ತಿಗೆ ದಾರರು ಮಳೆಯ ಕಾರಣದ ನೆಪವೊಡ್ಡಿ ಕಾಮಗಾರಿ ಮಾಡಿಲ್ಲ.
ಪ್ರತೀ ದಿನ ಶಾಲಾ ಕಾಲೇಜು ಮತ್ತು ಬಸ್ ಸಂಚಾರ ಇರುವ ಈ ರಸ್ತೆ ಕಾಮಗಾರಿ ಕಳೆದ ವರ್ಷ ಮಾಡಿದ್ದು ಸೇತುವೆ ಮಾತ್ರ ಮಾಡದೇ ಜನರಿಗೆ ತೀರಾ ತೊಂದರೆಯಾಗಿತ್ತು. ಇಷ್ಟರೊಳಗೆ ಅನೇಕರು ಬಿದ್ದ ಘಟನೆ ಸಂಭವಿಸಿದೆ.
ಹನೆಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ ಮತ್ತು ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ ಭೇಟಿ ನೀಡಿ, ಬಳಿಕ ಕ್ರೇನ್ ಮೂಲಕ ಟೆಂಪೋ ವನ್ನು ಮೇಲೆತ್ತಿ ರಸ್ತೆ ಸಂಚಾರಕ್ಕೆ ಅನುವು ಮಾಡಲಾಯಿತು.
ತಿರುವಿನಲ್ಲಿ ಅತೀ ಕಿರಿದಾಗಿ ಇರುವ ಕಿರು ಸೇತುವೆ ಸ್ವಲ್ಪ ನೇರ ಮತ್ತು ಅಗಲೀಕರಣ ಮಾಡಿ ಜನರಿಗೆ ಉಪಯುಕ್ತವಾಗುವಂತೆ ಮಾಡ ಬೇಕಾಗಿದೆ.
ಒಂದೊಮ್ಮೆ ಕಿರು ಸೇತುವೆ ಕುಸಿತವಾದರೆ ಬಾರಕೂರಿಗೆ ಸುತ್ತು ಬಳಸಿ ರಂಗನಕೆರೆ ಮೂಲಕ ಸಾಗಿ ಬರಬೇಕಾಗಿದ್ದು ಕೂಡಲೇ ಕಾಮಗಾರಿ ಮಾಡದಲ್ಲಿ ಸಾರ್ವಜನಿಕರು ಪ್ರತಿಭಟನೆಯ ಸಿದ್ಧತೆಯಲ್ಲಿದ್ದಾರೆ.
