ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ನಮೋ ಅಭಿಮಾನಿಗಳ ಬಳಗ ಭದ್ರಗಿರಿ ಬೈಕಾಡಿ ಇವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಉಡುಪಿ ಗ್ರಾಮಾಂತರ ಇವರ ಸಹಯೋಗದಲ್ಲಿ ಉಡುಪಿ ಶಾಸಕ ಕೆ ರಘುಪತಿ ಭಟ್ ಇವರ ಜನ್ಮ ದಿನದ ಅಂಗವಾಗಿ ಬೈಕಾಡಿ ಬಸ್ ನಿಲ್ದಾಣದ ಬಳಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಣೆ ಗುರುವಾರ ಜರುಗಿತು. ಶಾಸಕ ರಘುಪತಿ ಭಟ್ ಶಿಬಿರವನ್ನು ಉದ್ಘಾಟಿಸಿದರು.
ಇದೇ ಸಂದರ್ಬದಲ್ಲಿ 63 ಬಾರಿ ರಕ್ತ ನೀಡಿದ ದಾಖಲೆಯ ರಕ್ತದಾನಿ ಬ್ರಹ್ಮಾವರದ ಅಜ್ಮಲ್ ಅಸಾದಿ ಯವರು ಅವರ ಸಂಬಂಧಿ 20 ಬಾರಿ ರಕ್ತ ದಾನ ಮಾಡಿದ 41 ವರ್ಷದ ಇಂಬ್ರಾನ್ ಇವರು ಕೂಡಾ ರಕ್ತ ದಾನ ಮಾಡಿದರು.
ಅಜ್ಮಲ್ ಅಸಾದಿ ಈ ಸಂದರ್ಭ ಮಾತನಾಡಿ, ರಕ್ತವನ್ನು ಯಾವ ವಿಜ್ಞಾನಿಯೂ ಮಾಡಲಾಗದ ದೇವರು ನೀಡಿದ ಅಮೂಲ್ಯ ವಸ್ತು. ಆರೋಗ್ಯವಂತರು ರಕ್ತದಾನ ಮಾಡಿ ಹಲವಾರು ಮಾನವ ಜೀವಗಳನ್ನು ಉಳಿಸುವಂತ ಕಾರ್ಯ ಮಾಡಬೇಕು. ಮುಖ್ಯವಾಗಿ ನಮ್ಮ, ಜಿಲ್ಲೆಯಲ್ಲಿ ಬೇರೆ ಭಾಗದಿಂದ ಬಂದು ಇಲ್ಲಿ ದುಡಿಯುವ ಯುವಕರು ತುಂಬಾ ಮಂದಿ ಇದ್ದಾರೆ. ನೂರಾರು ಜನರು ಒಂದು ಕಡೆ ಇರುವ ಕೈಗಾರಿಕಾ ಕೇಂದ್ರದಲ್ಲಿ ಇದ್ದು, ಅವರಿಗೆ ರಕ್ತ ದಾನದ ಅರಿವು ಮೂಡಿಸಿದಲ್ಲಿ ಅನೇಕರಿಗೆ ರಕ್ತದ ನೆರವು ಪಡೆಯಲು ಸಂಘ ಸಂಸ್ಥೆಗಳು ಪ್ರಯತ್ನ ಮಾಡಬೇಕು ಎಂದರು.


ಪ್ರಸಾದ್ ನೇತ್ರಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಲ್ ಚೈಸ್ ಬೆಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಅಭಯ ಹಸ್ತ ಚಾರಿಟೇಬಲ್ ಉಡುಪಿ ಶಿಬಿರಕ್ಕೆ ಸಹಕಾರ ನೀಡಿತ್ತು.
ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್ , ರಾಜೇಶ್ ಶೆಟ್ಟಿ ಬಿರ್ತಿ, ಜಯಕರ ಶೆಟ್ಟಿ ಕುಂದಾಪುರ, ಸತೀಶ್ ಸಾಲ್ಯಾನ್ ಉಡುಪಿ, ರಾಜು ಪೂಜಾರಿ ಉಪ್ಪೂರು, ಬಿ..ವಿ ರಾವ್ ಬೈಕಾಡಿ, ರೋಟರಿ, ಹರೀಶ್ ಕುಂದರ್ ಬೈಕಾಡಿ, ಎಸ್ ನಾರಾಯಣ್, ಗಂಗಾಧರ ಶೆಟ್ಟಿ ಆರೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಲವಾರು ಮಂದಿ ನೇತ್ರದಾನ ನೋಂದಣಿ ಮಾಡಿದರೆ, ಇನ್ನು ಕೆಲವರು ಕನ್ನಡಕ, ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಆಯುಷ್ಮಾನ ಕಾರ್ಡ್ನ್ನು ಶಿಬಿರದಲ್ಲಿ ಪಡೆದರು.
