ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕರಾವಳಿ ಮಲೆನಾಡು ಜಿಲ್ಲೆಗಳು ಅತೀ ಹತ್ತಿರದಲ್ಲಿ ಸಂಪರ್ಕಿಸುವ ಆಗುಂಬೆ ಘಾಟಿ ಮಾರ್ಗದಲ್ಲಿ ಮಾರ್ಚ್ 4ರಿಂದ ಹತ್ತು ದಿನ ವಾಹನ ಸಂಚಾರ ನಿಲುಗಡೆ ಸಾಧ್ಯವಿದೆ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಡಳಿತಗಳು ಇನ್ನೂ ನಿರ್ಧರಿಸಿಲ್ಲ. ಆಗುಂಬೆ ಗೇಟಿನಿಂದ ಹೆಬ್ರಿ ವರೆಗೆ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರ ಅನುಷ್ಠಾನವಾಗುವ ರಸ್ತೆ ಡಾಂಬರಿಕರಣ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ 5.25 ಕೋಟಿ ರೂ ಅನುದಾನ ಮೀಸಲಿಟ್ಟಿದೆ. ಗುತ್ತಿಗೆ ಅಂತಿಮಗೊಂಡಿದ್ದು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಅಧಿಸೂಚನೆ ಪ್ರಕಟಿಸುವುದು ಮಾತ್ರ ಬಾಕಿ ಉಳಿದಿದೆ.
ಆಗುಂಬೆ ಘಾಟಿಯ ತಪಾಸಣಾ ಕೇಂದ್ರದಿಂದ( ಗೇಟ್ ) ಹೆಬ್ರಿ ವರೆಗೆ ಡಾಂಬರೀಕರಣ ಕಾಮಗಾರಿ ಅನುಷ್ಠಾನದ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ಉಪವಿಭಾಗ, ಶಿವಮೊಗ್ಗ, ಉಡುಪಿ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಕಾಮಗಾರಿ ಅನುಷ್ಠಾನ ಹತ್ತು ದಿನಗಳಲ್ಲಿ ಮುಕ್ತಾಯ ವಾಗದಿದ್ದರೆ ವಾಹನ ಸಂಚಾರ ನಿರ್ಬಂಧ ಅವಧಿ ಮುಂದುವರಿಯುವ ಸಾಧ್ಯತೆ ಇದೆ. ಬೇಸಿಗೆ ಅವಧಿಯಲ್ಲಿ ಡಾಂಬರೀಕರಣ ಕಾಮಗಾರಿ ಆರಂಭಿಸುವ ಉದ್ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ತ್ವರಿತಗತಿಯಲ್ಲಿ ಆಡಳಿತಾತ್ಮಕ ಕ್ರಮಕ್ಕೆ ಮುಂದಾಗಿದೆ.

