ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕಾರು ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ನೆಹರೂ ಮೈದಾನದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಶಿವಪ್ಪ (32) ಮೃತಪಟ್ಟವರು.
ಸರ್ವೀಸ್ ರಸ್ತೆಯಿಂದ ಎಡ ಭಾಗದ ಸರ್ವೀಸ್ ರಸ್ತೆಗೆ ತೆರಳುವ ಸಂಧರ್ಭ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಪರಿಣಾಮ ಶಿವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿ ವಲಸೆ ಕೂಲಿ ಕಾರ್ಮಿಕನಾಗಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಗ್ರಾಮದವರು ಎನ್ನಲಾಗಿದೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾರಿ ದೀಪ ಇಲ್ಲದೆ ಸಮಸ್ಯೆ:
ಘಟನೆಯ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ದೀಪ ಅಳವಡಿಸದೆ ಇರುವುದು ಹಾಗೂ ನಗರ ಪ್ರವೇಶಕ್ಕೆ ಅವಕಾಶ ನೀಡದೆ ಇರುವುದೇ ಅಪಘಾತಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.

ಒಂದು ಬದಿಯ ಸರ್ವೀಸ್ ರಸ್ತೆಯಿಂದ ಇನ್ನೊಂದು ಬದಿಯ ಸರ್ವೀಸ್ ರಸ್ತೆಗೆ ಬರಲು ಕಿ.ಮೀ ದೂರ ಸುತ್ತಿ ಬರಬೇಕು ಎನ್ನುವುದಕ್ಕಾಗಿ ಹೆದ್ದಾರಿ ದಾಟುವ ಪಾದಚಾರಿಗಳು, ಅಧಿಕಾರಿಗಳ ಹಾಗೂ ಗುತ್ತಿಗೆ ಕಂಪೆನಿಯ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದ್ದು, ಹೆದ್ದಾರಿಯಲ್ಲಿ ದಾರಿ ದೀಪ ಇಲ್ಲದಿರುವುದರಿಂದ, ವಾಹನ ಚಾಲಕರಿಗೆ ಪಾದಚಾರಿಗಳು ಕಾಣಿಸದೆ ಅಪಘಾತಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


































