ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಅಮರಾವತಿಯ ಅಮರ ಚರಿತೆ ಯಕ್ಷಗಾನ ಪ್ರಸಂಗ ಈಗಾಗಲೇ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಇದೀಗ ಕುಂದಾಪುರದಲ್ಲೂ ನಡೆಯಲಿದೆ. ಕುಂದಾಪುರದ ನೆಹರೂ ಮೈದಾನಕ್ಕೆ ಹೊತ್ತು ಬರಲು ಖುದ್ದು ನಿಜ ಗಜರಾಜನೇ ಹರಿಹರ ಮಠದಿಂದ ಹೊರಟಿದ್ದಾನೆ.
ಉದ್ಯಮಿ ಮಂಜುನಾಥ ಪೂಜಾರಿ ಬೆಳ್ಳಾಡಿ ಈ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಮರಾವತಿಯ ಅಮರ ಚರಿತೆ ಯಕ್ಷಗಾನ ವಿಶೇಷ ವೈಭವದಿಂದ ಮೇಳೈಸಲು ಸಜ್ಜಾಗಿದೆ. ತೆರೆದ ರಂಗಮಂಟಪದಲ್ಲಿ ಅಮರಾವತಿಯ ಅದ್ದೂರಿ ರಂಗಸಜ್ಜಿಕೆ, ಇಂದ್ರನ ಆಸನ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

ಗೌರವ ಪ್ರವೇಶ, ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಟಿಕೇಟಿನ ಬದಲು, ಗೌರವ ಪ್ರವೇಶಕ್ಕೆ ಇಂದ್ರ ಸಭೆ, ಗಂಧರ್ವ ಸಭೆ, ಕಿನ್ನರ ಸಭೆ ಎಂದು ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಪ್ರೇಕ್ಷಕರ ಆಸನದಲ್ಲೂ ಅಮರಾವತಿಯ ಚಿತ್ರಣ ಕಟ್ಟಿಕೊಡುವ ಕಾರ್ಯಕ್ಕೆ ಆಯೋಜಕರು ಮುಂದಾಗಿದ್ದು, ಪ್ರಮುಖ ಒಂದೇ ದ್ವಾರವಿದ್ದು, ಅದರಲ್ಲಿ ಇಬ್ಬರು ಈಟಿ ಹಿಡಿದು ನಿಲ್ಲುವ ಸೈನಿಕರು. ಅದೇ ದ್ವಾರದಲ್ಲಿ ಗಜರಾಜನ ಪ್ರವೇಶ ಆಗಲಿದೆ.

‘ಇರುಳ ವಿರುದ್ದ ಬೆಳಕಿನ ಯುದ್ದದ ಕತೆ’:
ಅಮರಾವತಿಯ ಅಮರ ಚರಿತೆ ‘ಇರುಳ ವಿರುದ್ದ ಬೆಳಕಿನ ಯುದ್ದದ ಕತೆ’ ಎಂಬ ಅಡಿಬರಹದಲ್ಲಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಪ್ರೇಕ್ಷಕರ ಮನ ತಣಿಸಲಿದೆ. ಮೂರು ಹಂತಗಳಲ್ಲಿ ಹಿಮ್ಮೇಳ, ಮುಮ್ಮೇಳ ಬದಲಾಗಲಾಗಿದ್ದು, ಮೊದಲಿಗೆ ತೆಂಕು-ಬಡಗಿನ ಕಲಾವಿದರ, ಮಹಿಳಾ ಕಲಾವಿದರ ಕೂಡುವಿಕೆಯಲ್ಲಿ ಸಮಾಗಮದಲ್ಲಿ ನಡೆಯಲಿದೆ. ತೆಂಕಿಗೆ ಹಿಮ್ಮೇಳನದಲ್ಲಿ ಮಹಿಳಾ ಭಾಗವತರು, ಬಡಗಿಗೆ ಜನ್ಸಾಲೆ, ಬಳಿಕ ಬಡಗಿನ ಸಾಲಿಗ್ರಾಮದ ಮೇಳದ ಸೆಟ್ಟಿಂಗ್. ಅದರಲ್ಲಿ ಇಡೀ ಸಾಲಿಗ್ರಾಮ ಮೇಳದ ಕಲಾವಿದರು ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಪ್ರದರ್ಶನ ನೀಡಲಿದ್ದು, ಕೊನೆಯದಾಗಿ ತೆಂಕಿನ ಪಟ್ಲ ಸತೀಶ್ ಅವರ ಸಾರಥ್ಯದಲ್ಲಿ ಪಾವಂಜೆ ಮೇಳದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.
ಮೂರು ಬಾರಿ ಬರಲಿದ್ದಾನೆ ಗಜರಾಜ!:
ಯಕ್ಷಗಾನದ ಕೊನೆಯ ಭಾಗದಲ್ಲಿ ದೇವೇಂದ್ರ ಗಜರಾಜನ (ನಿಜವಾದ ಆನೆಯ) ಮೇಲೆ ಕೂತು ಬರುವುದು ಯಕ್ಷಗಾನದ ವಿಶೇಷ ಆಕರ್ಷಣೆ. ಅಲ್ಲದೇ ಮಧ್ಯಭಾಗದಲ್ಲಿ ಗಜರಾಜನ ಪ್ರವೇಶ ಆಗಲಿದ್ದು, ಆ ಸಂದರ್ಭ ಗಜರಾಜನಿಗೆ ಪೂಜೆ ಕೈಂಕರ್ಯಗಳು ನಡೆಯುತ್ತದೆ.
ಒಂದು ಬಾರಿ ಗಜರಾಜನ ಪ್ರವೇಶ ಆಗಲಿದ್ದು, ಇದನ್ನು ಆಯೋಜಕರು ಯಾವ ಕಾರಣಕ್ಕಾಗಿ ಆನೆ ಪ್ರವೇಶ ಆಗಲಿದೆ ಎನ್ನುವುದನ್ನು ರಹಸ್ಯದಲ್ಲಿಟ್ಟಿದ್ದಾರೆ.

ಸನ್ಮಾನ:
ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ, ಹಿರಿಯ ಯಕ್ಷಗಾನ ಕಲಾವಿದರಾದ ಯಾಜಿ, ಉಜಿರೆ ನಾರಾಯಣ ಆಗಮಿಸಲಿದ್ದಾರೆ. ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಲ್ಕು ಸಾವಿರಕ್ಕೂ ಅಧಿಕ ಮಂದಿ ನಿರೀಕ್ಷೆ:
ಈಗಾಗಲೇ ಅಮರಾವತಿಯ ಅಮರ ಚರಿತೆ ಯಕ್ಷಗಾನದ ಪೋಸ್ಟರ್ ಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಕುಂದಗನ್ನಡದ ರಾಯಭಾರಿ ಮನು ಹಂದಾಡಿಯವರು ಕೂಡ ಯಕ್ಷಗಾನ ಪ್ರಚಾರಕ್ಕಾಗಿ ರಚಿಸಿದ ವಿಡಿಯೋ ಸಾಕಷ್ಟು ಯಕ್ಷ ರಸಿಕರನ್ನು ಸೆಳೆದಿದೆ. ಕುಂದಾಪುರದ ವಿನಾಯಕ ಗ್ರ್ಯಾಂಡ್ ಹೋಟೇಲ್ನಲ್ಲಿ ಮುಂಗಡ ಟೆಕೇಟುಗಳು ಲಭ್ಯವಿದೆ. ಈಗಾಗಲೇ ಸಾವಿರಕ್ಕೂ ಅಧಿಕ ಮುಂಗಡ ಟಿಕೇಟುಗಳು ಬುಕ್ ಆಗಿವೆ. ನಾಲ್ಕು ಸಾವಿರಕ್ಕೂ ಅಧಿಕ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಸಿದ್ದತೆಗಳು ನಡೆಯುತ್ತಿವೆ.

ಹೋಟೆಲ್ ಉದ್ಯಮಿಯ ಯಕ್ಷಗಾನ ಪ್ರೀತಿ:
ಮಂಜುನಾಥ ಪೂಜಾರಿ ಬೆಳ್ಳಾಡಿ ಬಾಗಲಕೋಟೆಯಲ್ಲಿ ಹೋಟೆಲ್ ಉದ್ಯಮಿ. ಬಾಲ್ಯದಿಂದಲೂ ಯಕ್ಷಗಾನದ ಹುಚ್ಚು ಹೊಂದಿರುವ ಅವರು ಅನೇಕ ಮೇಳದ ಕಲಾವಿದರು, ಯಜಮಾನರು ಸಂಗಡವಿದೆ. ಆದುದರಿಂದಲೇ ಅವರು ಇಂತದ್ದೊಂದು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ ಮಂಜುನಾಥ.
ಬಾಲ್ಯದಲ್ಲಿ ಇವರ ಮನೆ ಸಮೀಪ ನಡೆದ ಧರ್ಮಸ್ಥಳ ಮೇಳದ ಯಕ್ಷಗಾನದಲ್ಲಿ ಸಮುದ್ರ ಮಥನದ ವೇಳೆ ನಿಜವಾದ ಆನೆಯನ್ನು ಕರೆತಂದು ಯಕ್ಷಗಾನ ನಡೆಸಿರುವುದೇ ಸ್ಪೂರ್ತಿಯಾಗಿ ಪರಿಗಣಿಸಿದ್ದಾರೆ. ಕೋಟಿಗಟ್ಟಲೇ ಹಣ ಸುರಿದು ದೃಶ್ಯ ಕಾವ್ಯ ಕಟ್ಟಿಕೊಟ್ಟು ಕಣ್ಣಿಗೆ ಹಬ್ಬವನ್ನಾಗಿಸುವ ಸಿನೆಮಾಗಳನ್ನು ತೋರಿಸಿ, ಅದನ್ನು ಪ್ರೊಮೋಶನ್ ಮಾಡಿ ಅದಕ್ಕೆ ತಕ್ಕಂತೆ ಸಿನೆಮಾವನ್ನು ತಯಾರಿಸುವ ಇತ್ತೀಚಿನ ದಿನಗಳಲ್ಲಿ ಸಿನೆಮಾದಂತೆಯೇ ಯಕ್ಷಗಾನದಲ್ಲಿ ಯಾಕೆ ಮಾಡಬಾರದೆಂಬ ಆಲೋಚನೆಯಲ್ಲಿದ್ದಾಗ ಹೊಳೆದ್ದೆ ನಿಜ ಆನೆ ಪರಿಕಲ್ಪನೆ. ಆನೆ ತಂದ ಮೇಲೆ ಅದಕ್ಕೆ ತೂಕವಿರುವಂತಹ ಹೊಸತನವನ್ನು ತೋರಿಸಬೇಕು ಎಂಬ ದೃಷ್ಠಿಯಿಂದ ವೇದಿಕೆಯಲ್ಲಿ ಇಂದ್ರ ಸಭೆ, ಅದ್ದೂರಿ ಸ್ಟೇಜ್, ಕಮಾನು, ಪ್ರಚಾರ, ವೀಕ್ಷಕರ ಸಭೆ, ಅದಕ್ಕೆ ತಕ್ಕಂತೆ ಕಲಾವಿದರ ಆಯ್ಕೆ ಇವೆಲ್ಲವನ್ನು ಮುತುವರ್ಜಿಯಿಂದ ಮಾಡಿದ್ದಾರೆ.
ಮಂಜುನಾಥ ಬೆಳ್ಳಾಡಿಯವರ ಕನಸನ್ನು ಸಾಕಾರಗೊಳಿಸಲು ಕೈ ಜೋಡಿಸಿದ್ದು, ಶ್ರೀ ಉಡುಪಿ ಫುಡ್ ಹಬ್ ಹಾಗೂ ಮಲ್ವಾನ್ ತಡ್ಕ ಸೀ ಫುಡ್ ಕಿಚನ್ ಮುಂಬೈ-ಪುಣೆ- ಬೆಂಗಳೂರು. ಸರಿಸುಮಾರು ಆರೇಳು ಲಕ್ಷದ ಬಜೆಟ್ ಇಟ್ಟುಕೊಂಡು ಮಾಡುತ್ತಿರುವ ಈ ಯಕ್ಷಗಾನ ಟಿಕೇಟು ಹಣ ಮಾತ್ರವಲ್ಲದೇ ಕೆಲವು ದಾನಿಗಳ ಸಹಕಾರವನ್ನೂ ಪಡೆಯಲಾಗಿದೆ.

ಯಕ್ಷಕಾಶಿಯಲ್ಲಿ ಅಮರಾವತಿ!:
ಯಕ್ಷಗಾನದಲ್ಲಿ ಕೇವಲ ಕಲ್ಪನೆಯ ಲೋಕವಿರುವುದು ಸಾಮಾನ್ಯ ಸಂಗತಿಯಾದರೂ, ಅಮರಾವತಿ ಅಮರ ಚರಿತೆಯಲ್ಲಿ ಕಲ್ಪನೆಗೆ ಹೊಸ ರಂಗನ್ನು ಲೇಪಿಸಲಾಗಿದೆ. ನಿಜವಾದ ಆನೆ, ಬ್ಯಾಕ್ ಡ್ರಾಪ್ ಅಮರಾವತಿ ಸೆಟ್ಟಿಂಗ್, ಮೂಡುವ ಸೂರ್ಯ, ಅಮರಾವತಿಯ ಕಂಬಗಳು, ಮಧ್ಯದಲ್ಲಿ ಇಂದ್ರ ಸಿಂಹಾಸನವನ್ನು ಕಟ್ಟಿಕೊಡಲಾಗಿದೆ. ಸಮುದ್ರ ಮಥನಕ್ಕೆ 30 ಅಡಿ ಉದ್ದವ ಹಾವನ್ನು, ಮಂದಾರ ಪರ್ವತವನ್ನು ತಯಾರಿಸಲಾಗಿದೆ. ಇವೆಲ್ಲವನ್ನೂ ಮೆರವಣಿಗೆಯಲ್ಲಿ ಹೊತ್ತು ತರಲಿದ್ದಾರೆ.
ಯಕ್ಷಗಾನವನ್ನು ಇನ್ನೊಂದು ಹಂತಕ್ಕೆ ಕೊಂಡೊಂಯ್ಯಬೇಕೆಂಬ ದಿಸೆಯಲ್ಲಿ ಹೊಸ ಪ್ರಯತ್ನಕ್ಕ್ಕೆ ಕೈ ಹಾಕಿದ್ದೇನೆ. ಸಾಮಾನ್ಯ ಬಯಲಾಟಗಳಲ್ಲಿ ದೇವಲೋಕ, ಭೂ ಲೋಕ ಎಂದು ಕಲ್ಪನೆ ಮಾಡಿ ಪ್ರದರ್ಶನ ನಡೆಸುತ್ತಾರೆ. ಆದರೆ ಅಮರಾವತಿ ಅಮರಚರಿತೆ ಯಕ್ಷಗಾನದಲ್ಲಿ ಕಲ್ಪನೆಗಳಿಗೆ ಬಣ್ಣತುಂಬುವ ಪ್ರಯತ್ನ ಮಾಡಿದ್ದೇನೆ. ನಿಜವಾದ ಆನೆ ತರಿಸುವುದು ಸಮಾನ್ಯದ ಮಾತಲ್ಲ. ಅದಕ್ಕೆ ತಕ್ಕಂತೆ ತಯಾರಿ ನಡೆಸಬೇಕಾಗುತ್ತದೆ. ನಮ್ಮ ಹೊಸ ಪ್ರಯತ್ನ ಯಕ್ಷಕಾಶಿ ಕುಂದಾಪುರದಲ್ಲಿ ಹೊಸ ಇತಿಹಾಸ ಬರೆಯಲಿದೆಮಂಜುನಾಥ ಪೂಜಾರಿ ಬೆಳ್ಳಾಡಿ, ಯಕ್ಷ ಸಂಯೋಜಕ


































