ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಶಾಂತಿನಿಕೇತನ ಸಂಸ್ಥೆಯು ಹೆಬ್ರಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಕೃಷಿ ಹಾಗೂ ಧಾರ್ಮಿಕ, ವಲಯಗಳಲ್ಲಿ ವಿಭಿನ್ನ ರೀತಿಯಲ್ಲಿ ಸೇವೆ ಮಾಡುವುದರ ಮೂಲಕ ಹೆಬ್ರಿಯಲ್ಲಿ ಗುರುತಿಸಿಕೊಂಡಿದೆ. ಈ ಸಂಸ್ಥೆಯು ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳು ತೊಡಗಿಸಿಕೊಂಡ ಕಾರಣ ಈ ಸಂಸ್ಥೆ ಹೆಬ್ರಿಯ ಹೆಮ್ಮೆಯ ಸಂಸ್ಥೆ ಎಂದು ಹೇಳಲು ಅತೀವ ಸಂತೋಷವಾಗುತ್ತಿದೆ ಎಂದು ಅಮೃತ ಭಾರತೀಯ ಟ್ರಸ್ಟ್ ನ ಕಾರ್ಯದರ್ಶಿ ಹೆಚ್ ಗುರುದಾಸ್ ಶೆಣೈ ಹೇಳಿದರು.
ಅವರು ಹೆಬ್ರಿಯ ಕುಚ್ಚೂರು ಶಾಂತಿನಿಕೇತನ ಯುವ ವೃಂದಕ್ಕೆ ದೊರೆತ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿಯ ಹಿನ್ನೆಲೆಯಲ್ಲಿ ಹೆಬ್ರಿಯಲ್ಲಿ ಶಾಂತಿನಿಕೇತನದ ಸದಸ್ಯರು ನಡೆಸಿದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದರು.

ಅತ್ಯಂತ ಗ್ರಾಮೀಣ ಪ್ರದೇಶದ ಕುಚ್ಚೂರು ಕುಡಿಬೈಲಿನಲ್ಲಿ ವಿಶೇಷ ಯೋಜನೆ ಯೋಷನೆ ಪರಿಕಲ್ಪನೆಯೊಂದಿಗೆ ೨೦೧೩ರಲ್ಲಿ ಸ್ಥಾಪನೆಗೊಂಡ ಶಾಂತಿನಿಕೇತನ ಯುವ ವೃಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕೃಷಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಠ ರೀತಿಯಲ್ಲಿ ಸೇವೆ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಲ 2020-21ನೇ ಸಾಲಿನ ಪ್ರಶಸ್ತಿ ದೊರೆತಿದ್ದು ಸೋಮವಾರ ಉಡುಪಿಯಲ್ಲಿ ಜಿಲ್ಲಾಧಿಕಾರಿ ಪ್ರದಾನ ಮಾಡಿದ್ದು ಹೆಮ್ಮೆಯ ಸಂಗತಿ, ಸಹಕರಿಸಿದ ಎಲ್ಲರಿಗೂ ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್ ಧನ್ಯವಾದ ತಿಳಿಸಿದರು.
ಸಂಘದ ಪೋಷಕರಾದ ಹೆಬ್ರಿ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಭಾರ್ಗವಿ ಆರ್ ಐತಾಳ್, ಅಮೃತಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ, ಪಂಚಾಯಿತಿ ಸದಸ್ಯರಾದ ಹೆಬ್ರಿಯ ಎಚ್.ಜನಾರ್ಧನ್, ಕುಚ್ಚೂರಿನ ಮಹೇಶ ಶೆಟ್ಟಿ, ಮಹೇಶ ಶೆಟ್ಟಿ ಬಾದ್ಲು, ಸಮಾಜಸೇವಕ ಶ್ರೀಕಾಂತ್ ಪೂಜಾರಿ ಮತ್ತಿತರರು ಅಭಿನಂದಿಸಿದರು.
ಪ್ರಶಸ್ತಿಯ ಸಂಭ್ರಮಕ್ಕೆ ಶಾಂತಿನಿಕೇತನ ಯುವ ವೃಂದದ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
