ಚಂದನವನ : ಅಭಿಮಾನಿಗಳ ಆಶಯದಂತೆ ಮತ್ತೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಕನ ಟೋಪಿ ಹಾಕುತ್ತಿದ್ದಾರೆ. ಹೌದು, ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಕೊಂಬು ಇರುವ ಕುದುರೆಯನ್ನು ಏರಿ ಉಪೇಂದ್ರ ಬಂದಿದ್ದಾರೆ. ಇದು ಕುತೂಹಲ ಹುಟ್ಟಿಸಿದೆ.
ಭಿನ್ನ-ವಿಭಿನ್ನವಾದ ಶೀರ್ಷಿಕೆಗಳನ್ನು ಇಡುವುದರಲ್ಲಿ ಉಪ್ಪಿ ಫೇಮಸ್. ಈ ಬಾರಿ ಕೂಡ ಅಂಥದ್ದೇ ಒಂದು ಹೊಸ ಟೈಟಲ್ ನ್ನು ತಮ್ಮ ಚಿತ್ರಕ್ಕೆ ಇಟ್ಟಿದ್ದಾರೆ.
ಟೈಟಲ್ ನ್ನು ಅದನ್ನು ಕುದುರೆ ಲಾಳ ಎನ್ನಬೇಕೋ, ಮೂರು ನಾಮ ಎನ್ನಬೇಕೋ, ಉಗುರಿನ ಮೇಲೆ ಮತದಾನದ ಇಂಕು ಹತ್ತಿರುವ ಗುರುತು ಎನ್ನಬೇಕೋ ಎಂಬುದು ಗೊತ್ತಾಗುತ್ತಿಲ್ಲ.

ಈ ಫಸ್ಟ್ ಲುಕ್ ಪೋಸ್ಟರ್ ಜೊತೆ ಉಪೇಂದ್ರ ಹೀಗೆ ಬರೆದುಕೊಂಡಿದ್ದಾರೆ. ‘ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಪೋಸ್ಟರ್ನಲ್ಲಿ ಉಪೇಂದ್ರ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಚಿತ್ರಕ್ಕೆ ‘ಲಹರಿ ಫಿಲ್ಮ್ಸ್’ ಮತ್ತು ‘ವೀನಸ್ ಎಂಟರ್ಟೇನರ್ಸ್’ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ. ಜಿ. ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ. ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
