ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ತೋಟದ ಬಾವಿಗೆ ಕಾಲು ಜಾರಿ ಬಿದ್ದು ಕೆದೂರು ಮಂಡಲದ ಮಾಜಿ ಮಂಡಲ ಪ್ರಧಾನ ಕಂದಾವರ ಸುಧಾಕರ ಹೆಗ್ಡೆ(85) ಮೃತಪಟ್ಟಿದ್ದಾರೆ.
ಮನೆಯ ಹಿತ್ತಲಿನ ಅಡಿಕೆ ಮರಗಳಿಗೆ ಪಂಪ್ ಸೆಟ್ ಮಖಾಂತರ ನೀರು ಬೀಡಲು ಹೋದವರು ಪಂಪಸೆಟ್ ಬಳಿ ಇದ್ದ ಆವರಣವಿಲ್ಲದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೃತರು ಪತ್ನಿ, ಕೊರ್ಗಿ ಗ್ರಾಪಂ ಅಧ್ಯಕ್ಷ ಕೆ.ಗೌರೀಶ್ ಹೆಗ್ಡೆ ಸಹಿತ ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಹಲವು ವರ್ಷಗಳಿಂದ ಜನತಾದಳದ ಮೂಲಕ ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಂಡಿದ್ದ ಸುಧಾಕರ ಹೆಗ್ಡೆ, 1988 ರಲ್ಲಿ ಕೆದೂರು ಮಂಡಲದ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸಿದ್ದರು.
ಸುಧಾಕರ ಹೆಗ್ಡೆ ಅವರ ನಿಧನಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮೊದಲಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.
