ಉಡುಪಿ : ಕನ್ನಡ ವಿವಿಧತೆಯ ಭಾಷೆಯಾಗಿದ್ದು, ಪುಸ್ತಕ ಪ್ರೀತಿ ನಾವೆಲ್ಲರೂ ಬೆಳೆಸಬೇಕಾಗಿದೆ. ನಮ್ಮ ಶ್ರೇಷ್ಠ ಕವಿಗಳು ನಮ್ಮ ನಾಡು ನುಡಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರ ಕೃತಿಗಳನ್ನು ಓದಿ ಅದರ ಸಾರವನ್ನು ನಾವು ಹಂಚಬೇಕು.ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಕೂಡ ಕೈ ಜೋಡಿಸಬೇಕು ಎಂದು ಮನೋವೈದ್ಯ ಡಾ ಪಿ ವಿ ಭಂಡಾರಿ ಹೇಳಿದರು.
ಅವರು ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಬಾವುಟವನ್ನು ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಅವರಿಗೆ ಹಸ್ತಾಂತರಿಸಿದರು.

ಮಣಿಪಾಲ್ ಯುನಿವರ್ಸಲ್ ಪ್ರೆಸ್ ನ ಪ್ರಧಾನ ಸಂಪಾದಕರಾದ ಪ್ರೊಫೆಸರ್ ನೀತ ಇನಮ್ದಾರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ತಾಲೂಕು ಸಮಿತಿಯ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಗೌರವ ಕೋಶಾಧ್ಯಕ್ಷರಾದ ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಪ್ರಾಸ್ತಾವಿಕ ಮಾತನಾಡಿದರು. ಜನಾರ್ದನ್ ಕೊಡವೂರು ಸ್ವಾಗತಿಸಿ ರಾಜೇಶ್ ಭಟ್ ಪಣಿಯಾಡಿ ಧನ್ಯವಾದ ನೀಡಿದರು. ಜಿಲ್ಲಾ ಸಮಿತಿಯ ಸದಸ್ಯ ಪೂರ್ಣಿಮಾ ಜನಾರ್ಧನ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಕನ್ನಡದ ಗೀತ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.


































