ಬೆಂಗಳೂರು: ರಾಜ್ಯದಲ್ಲಿ ಅನೇಕ ಗ್ರಾಮಗಳಿಗೆ ಜಾತಿ ಸೂಚಕ ಹೆಸರುಗಳಿವೆ. ವಡ್ಡರಹಟ್ಟಿ, ಗೊಲ್ಲರಹಟ್ಟಿ, ಬೋವಿಹಟ್ಟಿ ಹೀಗೆ ಮೊದಲಾದಂತ ಜಾತಿ ಸೂಚಕ ಹೆಸರಿರುವಂತ ಗ್ರಾಮಗಳ ಹೆಸರನ್ನು ರದ್ದು ಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಶಾಸಕ ಬಸವನಗೌಡ ತುರವಿಹಾಳ್ ಕೇಳಿದಂತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಅನೇಕ ಕಡೆಯಲ್ಲಿ ವಡ್ಡರಹಟ್ಟಿ, ಗೊಲ್ಲರಹಟ್ಟಿ, ಕುರುಬರ ಹಟ್ಟಿ ಸೇರಿದಂತೆ ನಾನಾ ರೀತಿಯ ಜಾತಿ ಸೂಚಕ ಹೆಸರುಗಳಿವೆ. ಈ ಜಾತಿ ಸೂಚಕ ಹೆಸರಿರುವಂತ ಗ್ರಾಮಗಳ ಹೆಸರನ್ನು ತಕ್ಷಣವೇ ತೆಗೆದು ಹಾಕಲು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ಕೆಲವು ಕಡೆಗಳಲ್ಲಿ ವಡ್ಡರಪಾಳ್ಯ, ಮಾದಿಗರಹಳ್ಳಿ ಎಂಬಂತ ಜಾತಿ ಸೂಚಕ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ. ದಯವಿಟ್ಟು ನಿಮ್ಮ ಅಧಿಕಾರಿಗಳಿಗೆ ಈ ಹೆಸರುಗಳನ್ನು ತೆಗೆಯುವಂತೆ ಸೂಚಿಸಲು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜರೇ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಸೇರಿದಂತೆ ಇತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಇದು ಬೇಗ ಮುಗಿಯುವ ಪ್ರಕ್ರಿಯೆಯಲ್ಲ. ಇದಕ್ಕೆ 8, 9 ತಿಂಗಳು ಆಗಲಿದೆ. ಆದರೆ, ಜಾತಿ ಸೂಚಕ ಹೆಸರಿರುವಂತ ಗ್ರಾಮಗಳ ಹೆಸರನ್ನು ರದ್ದುಪಡಿಸಲು ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.


































